ಸೇಡಂ: ಶಾಲಾ ಚಾವಣಿ ಪದರು ಕುಸಿದು ಗಾಯಗೊಂಡ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ಅವರ ಚಿಕಿತ್ಸೆ ಮುಂದುವರೆದಿದೆ.
ಯಾದಗಿರಿ ಜಿಲ್ಲಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಶುಕ್ರವಾರ ಮನೆಗೆ ಮರಳಿದ್ದರು. ಅಕ್ಷತಾ ತಲೆಗೆ ಪೆಟ್ಟಾದ ಸ್ಥಳದಲ್ಲಿ ರಕ್ತ ಹೆಪ್ಪು ಗಟ್ಟಿದಂತಾಗಿದೆ, ನೋವು ಹೆಚ್ಚಾಗುತ್ತಿದೆ ಎಂದು ಪಾಲಕರು ಶನಿವಾರ ಮುಖ್ಯಶಿಕ್ಷಕ ದೇವರಾಜ ಕೋರಿ ಗಮನಕ್ಕೆ ತಂದು ಕಲಬುರಗಿಯ ಟ್ರಾಮಾ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಕಾರ್ಯ ಮುಂದುವರೆದಿದೆ. ಗಾಯಗೊಂಡ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಆತಂಕ ಪಡುವ ಅವಶ್ಯಕತೆಯಿಲ್ಲ. ಚಿಕಿತ್ಸೆ ನೀಡಿದ್ದಲ್ಲಿ ಗುಣಮುಖವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಶಿಕ್ಷಕ ದೇವರಾಜ ಕೋರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಶಿಕ್ಷಕನ ಕೈಯಿಂದಲೇ ಹಣ ಖರ್ಚು: ಗಾಯಗೊಂಡ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ದೇವರಾಜ ಕೋರಿ ಚಿಕಿತ್ಸೆ ಖರ್ಚು ನೀಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ₹10ಸಾವಿರಕ್ಕೂ ಅಧಿಕ ಖರ್ಚಾಗಿದೆ ಎನ್ನಲಾಗಿದೆ. ಅಕ್ಷತಾ ಕುಟುಂಬವು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದರಿಂದ ಕಲಬುರಗಿ ಟ್ರಾಮಾ ಸೆಂಟರ್ ನಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.