ಚಿತ್ತಾಪುರ: ಸಮುದಾಯ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ಸ್ಥಳೀಯ ಮಟ್ಟದಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಸತೀಶ ಸುಲೆಪೇಟ ಹೇಳಿದರು.
ತಾಲ್ಲೂಕಿನ ದಂಡೋತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ 'ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ' ಕುರಿತು ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿ, ಸಿಬ್ಬಂದಿ ಮತ್ತು ಸ್ವ ಸಹಾಯಕ ಸಂಘದ ಸದಸ್ಯರಿಗೆ ಹಮ್ಮಿಕೊಂಡ ತರಬೇತಿಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಸಭೆ, ಸರ್ಕಾರದ ಯೋಜನೆ, ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕೊರತೆ ಇದೆ. ನಮಗ್ಯಾಕೆ ಅದರ ಉಸಾಬರಿ ಎಂದು ಅಸಡ್ಡೆ ತೋರಬಾರದು. ಸಂವಿಧಾನ ನೀಡಿರುವ ಅಧಿಕಾರ ಸದುಪಯೋಗ ಮಾಡಿಕೊಳ್ಳಬೇಕು. ಹಕ್ಕು ಕೇಳುವವರು ತಮ್ಮ ಕರ್ತವ್ಯ, ಜವಾಬ್ದಾರಿ ನಿರ್ವಹಣೆಗೆ ಸಿದ್ಧರಾಗಬೇಕು ಎಂದು ಹೇಳಿದರು.
ಸಮಸ್ಯೆಯನ್ನು ಅರಿತಾಗಲೇ ಪರಿಹಾರ ಸಾಧ್ಯವಾಗುತ್ತದೆ. ಗ್ರಾಮಗಳ ಸಮಗ್ರ ಅಭಿವೃದ್ಧಿ, ಕ್ರಿಯಾ ಯೋಜನೆ ಸಿದ್ಧಪಡಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿ ದೂರದೃಷ್ಟಿ ಹೊಂದಿರಬೇಕು ಎಂದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗಮ್ಮ ಕೊಂಕನಳ್ಳಿ ಉದ್ಘಾಟಿಸಿದರು. ಸದಸ್ಯರಾದ ಶರಣಪ್ಪ ಹಾದಿಮನಿ, ಈರಣ್ಣ ಕುರಕುಂಟಿ, ಶರಣಪ್ಪ ತೊಟನಳ್ಳಿ, ಪಂಚಾಯಿತಿ ಲೆಕ್ಕಾಧಿಕಾರಿ ಸಾಬಣ್ಣ ಕೋಳಕೂರ, ಅಯ್ಯೂಬ್ ಖಾನ್ ಶೇಖ್, ಜೈಪಾಲಸಿಂಗ್ ಶಿವಕುಮಾರ ಕುಂಬಾರ, ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮಹಾದೇವಿ ಭೃಂಗಿಮಠ, ಸರಸ್ವತಿ, ವಿದ್ಯಾನಿಧಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.