ADVERTISEMENT

ಸರಣಿ ಕಳ್ಳತನ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 6:13 IST
Last Updated 14 ಜುಲೈ 2024, 6:13 IST
ಕಲಬುರಗಿಯ ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ಆವರಣದಲ್ಲಿ ಕಳ್ಳರಿಂದ ಜಪ್ತಿ ಮಾಡಿಕೊಂಡ ಸ್ವತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ
ಕಲಬುರಗಿಯ ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ಆವರಣದಲ್ಲಿ ಕಳ್ಳರಿಂದ ಜಪ್ತಿ ಮಾಡಿಕೊಂಡ ಸ್ವತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ   

ಕಲಬುರಗಿ: ಕಳೆದ ಎರಡು ತಿಂಗಳ ಅವಧಿಯಲ್ಲಿನ ಟ್ರ್ಯಾಕ್ಟರ್ ಮತ್ತು ಬೈಕ್‌ಗಳ ಕಳ್ಳತನ ಸಂಬಂಧ ದಾಖಲಾದ ಕೆಲವು ಪ್ರಕರಣಗಳಲ್ಲಿ ನಿಂಬರ್ಗಾ ಠಾಣೆಯ ಪೊಲೀಸರು ಶನಿವಾರ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ₹ 14 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಭೂಸನೂರಿನ ಪೃಥ್ವಿರಾಜ್ ಕೃಷ್ಣಪ್ಪ (27), ಮಹಿಬೂಬ್ ನಬಿಸಾಬ್ (20), ರಾಹುಲ್ ಅಶೋಕ (22), ಮಹಮ್ಮದ್ ರಫಿ (25), ಕರೀಮ್ ಇಬ್ರಾಹಿಂಸಾಬ್ (19) ಹಾಗೂ ಅಮಿನ್ ನನ್ನುಸಾಬ್ (20) ಬಂಧಿತರು. ಆರೋಪಿಗಳು ಒಂದೇ ಗ್ರಾಮದವರಾಗಿದ್ದಾರೆ.

ಭೂಸನೂರು ವ್ಯಾಪ್ತಿಯಲ್ಲಿ ಕಳುವಾದ ₹ 30 ಸಾವಿರ ಮೌಲ್ಯದ ಒಂದು ಬೈಕ್, ವಾರಸುದಾರರಿಲ್ಲದ ₹ 3.80 ಲಕ್ಷ ಮೌಲ್ಯದ 9 ಬೈಕ್‌ಗಳು, ₹ 4.25 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಎಂಜಿನ್, ₹ 4.65 ಲಕ್ಷ ಮೌಲ್ಯದ ಟ್ರಾಲಿ ಸಹಿತ ಟ್ರ್ಯಾಕ್ಟರ್, ₹ 1 ಲಕ್ಷ ಮೌಲ್ಯದ 2 ಟ್ರಾಲಿಗಳು ಸೇರಿ ಒಟ್ಟು ₹ 14 ಲಕ್ಷ ಮೌಲ್ಯದ ಸ್ವತ್ತುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿಂದ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆಳಂದ ಸಿಪಿಐ ಪ್ರಕಾಶ ಆರ್. ಯಾತನೂರ ನೇತೃತ್ವದಲ್ಲಿ ನಿಂಬರ್ಗಾ ಠಾಣೆಯ ಪಿಎಸ್‌ಐಗಳಾದ ಬಸವರಾಜ ಸಣಮನಿ (ತನಿಖೆ), ಸಂಜೀವರಡ್ಡಿ, ಸಿಡಿಆರ್‌ ಶಾಖೆಯ ಬಲರಾಮ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನಿಖಾ ತಂಡದ ಕಾರ್ಯಕ್ಕೆ ಎಸ್‌.ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಎನ್‌.ಶ್ರೀನಿಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲ್ಲು ಎತ್ತಿಹಾಕಿ ಕೊಲೆ: ಚಿಂಚೋಳಿ ತಾಲ್ಲೂಕಿನ ನೀಮಾಹೊಸಳ್ಳಿ ಗ್ರಾಮದ ಜಮೀನಿನಲ್ಲಿ ಅಪರಿಚಿತರು ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದಾರೆ.

ಕುಸರಂಪಳ್ಳಿ ಗ್ರಾಮದ ನಿವಾಸಿ ಮಹೇಶ ಹಣಮಂತ (30) ಕೊಲೆಯಾದವರು. ಅಪರಿಚಿತರ ವಿರುದ್ಧ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 10ರ ಸಂಜೆ ಹೊಲಕ್ಕೆ ಹೋಗಿ ಮೇವು ತರುವುದಾಗಿ ತೆರಳಿದ್ದರು. ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿತ್ತು. ಮರುದಿನವೂ ಹುಡುಕಾಡಿದರು ಸಿಗಲಿಲ್ಲ. ಶುಕ್ರವಾರ ಬೆಳಿಗ್ಗೆ ನೀಮಾಹೊಸಳ್ಳಿಯ ಹೊಲದಲ್ಲಿ ಶವವಾಗಿ ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯೆಗೆ ₹ 23.94 ಲಕ್ಷ ವಂಚನೆ: ಷೇರು ಪೇಟೆಯಲ್ಲಿ ಷೇರು ಖರಿಸಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವಂಚಕರು, ನಗರದ ವೈದ್ಯೆಯೊಬ್ಬರಿಂದ ₹ 23.94 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ‘ಸೆನ್‌’ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಗತ್ ವೃತ್ತ ಸಮೀಪದ ನಿವಾಸಿ ಡಾ.ಸ್ವಾತಿ ಮಲ್ಲಿನಾಥ ಹಣ ಕಳೆದುಕೊಂಡ ಸಂತ್ರಸ್ತೆ. ರವಿ ಪಟೇಲ್ ಮತ್ತು ಅನಿಲ್ ದೇಶಮುಖ ಎಂಬುವವರ ವಿರುದ್ಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾತಿ ಅವರಿಗೆ ಪೋನ್ ಕರೆ ಮಾಡಿದ ಆರೋಪಿಗಳು, ಮುಂಬೈನ ಮಾಸ್ಟರ್ ಕ್ಯಾಪಿಟಲ್ ಲಿಮಿಟೆಡ್ ಕಂಪನಿಯ ಷೇರು ಖರೀದಿಸಿ ಲಾಭ ಮಾಡಿಕೊಡುವುದಾಗಿ ಹೇಳಿ ಸ್ವಾತಿ ಅವರನ್ನು ನಂಬಿಸಿದ್ದರು. ಅವರ ಮಾತು ನಂಬಿ, ವಿವಿಧ ಬ್ಯಾಂಕ್‌ಗಳಿಂದ ಆರ್‌ಟಿಜಿಎಸ್, ಐಎಂಪಿಎಸ್ ಮೂಲಕ ಹಂತ ಹಂತವಾಗಿ ₹ 23.94 ಲಕ್ಷ ಜಮೆ ಮಾಡಿದ್ದಾರೆ. ಲಾಭಾಂಶ, ಪಡೆದ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ತೆ ಮನೆಯಲ್ಲಿ ಚಿನ್ನಾಭರಣ ಕದ್ದ ಅಳಿಯ!
ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ಚಿನ್ನಾಭರಣ ಕದ್ದ ಆರೋಪದಡಿ ಮಹಿಳೆಯೊಬ್ಬರು ತನ್ನ ಅಣ್ಣ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಲಿಂಗೇಶ್ವರ ಕಾಲೊನಿ ನಿವಾಸಿ ಯಲಗೂಡ ಗ್ರಾಮದ ಉಪ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಸುರಕ್ಷಣಾಧಿಕಾರಿ ಮಹಾನಂದಾ ಶಿವಾನಂದ ಅವರ ಮನೆಯಲ್ಲಿ ಕಳುವಾಗಿದೆ. ಮಹಾನಂದಾ ಅವರ ಅಣ್ಣನ ಮಗ ಅಂಬರೇಶ ತಡಕಲ್ ವಿರುದ್ಧ ಸಬ್‌ ಅರ್ಬನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 8ರಂದು ಅಂಬರೀಶ್ ಮಹಾನಂದಾ ಮನೆಗೆ ಬಂದಿದ್ದರು. ಮನೆಯ ಸದಸ್ಯರು ಹೊರ ಹೋದಾಗ ಅಂಬರೀಶ್ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ₹ 2.56 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಶಂಕೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ದಿನ ಎರಡು ಮನೆಗಳಲ್ಲಿ ಕಳವು
ಚಿತ್ತಾಪುರ: ಪಟ್ಟಣದಲ್ಲಿ ಮನೆ ಕಳ್ಳರ ಹಾವಳಿ ಶುರುವಾಗಿದ್ದು ಎರಡು ಮನೆಗಳಲ್ಲಿ ಕಳ್ಳತನ ಹಾಗೂ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಆಶ್ರಯ ಬಡಾವಣೆಯ ಸೂರನದೇವಿ ದ್ಯಾವಪ್ಪ ಅವರ ಮನೆಯಲ್ಲಿನ 5 ಗ್ರಾಂ. ಚಿನ್ನ ಮತ್ತು ₹50 ಸಾವಿರ ನಗದು ಕಳುವಾಗಿದೆ. ಅದೇ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ವೆಂಕಟೇಶ್ವರ ಬಡಾವಣೆಯ ಸಂಜಯಿನಿ ಶರಣಬಸಪ್ಪ ಅವರ ಮನೆಯಲ್ಲಿ 18 ಗ್ರಾಂ. ಬಂಗಾರ 32 ತೊಲೆ ಬೆಳ್ಳಿ ಹಾಗೂ ₹42 ಸಾವಿರ ನಗದು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸಿಪಿಐ ಚಂದ್ರಶೇಖರ ತಿಗಡಿ ಪಿಎಸ್ಐ ಶ್ರೀಶೈಲ ಅಂಬಾಟಿ ಪಿಎಸ್ಐ ಚಂದ್ರಾಮಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಐವರ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಗಣೇಶ ನಗರದಲ್ಲಿ ಶುಕ್ರವಾರ ಮಧ್ಯರಾತ್ರಿ 2.40ರ ಸುಮಾರಿಗೆ ಐವರು ಮುಖ ಮರೆಮಾಚಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಮನೆಯೊಂದರ ಮುಂದೆ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.