ADVERTISEMENT

ಶಾಲೆಯಲ್ಲೇ ಉಳಿಸಿಕೊಂಡು ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

ಅವಧಿ ಮುಗಿದ ಮೇಲೂ ಶಾಲೆಯಲ್ಲಿಯೇ ಕೃತ್ಯ ಎಸಗುತ್ತಿದ್ದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 5:37 IST
Last Updated 8 ಡಿಸೆಂಬರ್ 2019, 5:37 IST
   

ಕಲಬುರ್ಗಿ: ಇಬ್ಬರು ಬಾಲಕಿಯರನ್ನು ಶಾಲಾ ಅವಧಿಯ ನಂತರ ಶಾಲೆಯಲ್ಲಿಯೇ ಉಳಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸೇಡಂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ (59) ಅವರನ್ನು ಶನಿವಾರ ಬಂಧಿಸಲಾಗಿದೆ.

‘ಮೂರನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕಿಯರಿಗೆ ಶಿಕ್ಷಕ ಪದೇಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಶಾಲಾ ಅವಧಿ ಮುಗಿದ ನಂತರವೂ ವಿಶೇಷ ತರಗತಿ ತೆಗೆದುಕೊಳ್ಳುವುದಾಗಿ ನಂಬಿಸಿ ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಳ್ಳುತ್ತಿದ್ದ. ಈ ಬಗ್ಗೆ ಮಕ್ಕಳು ತಮ್ಮ ಪಾಲಕರಲ್ಲಿ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಸೇಡಂ ಸಿಪಿಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

‘ನ. 24ರಂದು ಕೂಡ ಶಾಲಾ ಸಮಯ ಮುಗಿದ ನಂತರ ಶಿಕ್ಷಕ ಇಬ್ಬರೂ ಬಾಲಕಿಯರನ್ನು ತರಗತಿಯಲ್ಲೇ ಉಳಿಸಿಕೊಂಡಿದ್ದ. ಒಬ್ಬ ಬಾಲಕಿಯನ್ನು ಬಾಗಿಲಲ್ಲಿ ನಿಲ್ಲಿಸಿ, ಯಾರಾದರೂ ಬಂದರೆ ತಿಳಿಸು ಎಂದು ಹೇಳಿದ್ದ. ಬಳಿಕ ಒಳಗಿನ ಬಾಲಕಿಯನ್ನು ಹೊರಗೆ ಕಳುಹಿಸಿ, ಬಾಗಿಲಲ್ಲಿ ನಿಲ್ಲಿಸಿದ್ದ ಇನ್ನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.