ADVERTISEMENT

ಶರಣಬಸವೇಶ್ವರ ದರ್ಶನಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 17:01 IST
Last Updated 15 ಆಗಸ್ಟ್ 2022, 17:01 IST
ಶ್ರಾವಣ ಮಾಸದ ನಡುವಿನ ಸೋಮವಾರದ ಪ್ರಯುಕ್ತ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು
ಶ್ರಾವಣ ಮಾಸದ ನಡುವಿನ ಸೋಮವಾರದ ಪ್ರಯುಕ್ತ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು   

ಕಲಬುರಗಿ: ಶ್ರಾವಣ ಮಾಸದ ಮೂರನೇ ಸೋಮವಾರದ ಪ್ರಯುಕ್ತ ಕಲಬುರಗಿ, ಯಾದಗಿರಿ, ಬೀದರ್ ಸೇರಿ ಹಲವು ಜಿಲ್ಲೆಗಳ ಸಾವಿರಾರು ಭಕ್ತರು ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಸ್ವಾತಂತ್ರ್ಯ ದಿನಾಚರಣೆ ಮತ್ತು ಮೂರನೇ ಸೋಮವಾರ ಒಂದೇ ದಿನ ಬಂದಿದ್ದರಿಂದ ದೇವಸ್ಥಾನ ಆವರಣದಲ್ಲಿ ದೇಶ ಭಕ್ತಿಯ ರಾಷ್ಟ್ರಧ್ವಜ ಹಿಡಿದವರು ಹಾಗೂ ದಾಸೋಹ ಕಾಯಕದ ಅಪ್ಪನ ಭಕ್ತರೂ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದರು.

ಬೆಳಗಿನ ಜಾವದಿಂದಲೇ ಶರಣಬಸವೇಶ್ವರರ ಕರ್ತೃ ಗದ್ದುಗೆಯ ಮೂರ್ತಿಗಳನ್ನು ಶುಚಿಗೊಳಿಸಿ, ನಾನಾ ಬಗೆಯ ಹೂಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ನೆರವೇರಿಸಲಾಯಿತು. ಜಿಟಿಜಿಟಿ ಮಳೆಯ ಮಧ್ಯೆಯೂ ಭಕ್ತರು ದೇವಸ್ಥಾನದತ್ತ ಹೆಜ್ಜೆ ಹಾಕಿದ್ದು ಕಂಡುಬಂತು.

ADVERTISEMENT

ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ಕೈಗೊಳ್ಳಲಾಯಿತು. ಪಲ್ಲಕ್ಕಿಯೊಂದಿಗೆ ಭಕ್ತರೂ ದೇವಾಲಯದ ಪ್ರದಕ್ಷಿಣೆ ಹಾಕಿ ತಮ್ಮ ಹರಕೆ ತೀರಿಸಿದರು.

ದೂರದಿಂದಲೇ ಕಾಲ್ನಡಿಗೆಯಲ್ಲಿ ಬಂದ ಭಕ್ತರು ನೈವೇದ್ಯ ಅರ್ಪಿಸಿ, ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.