ADVERTISEMENT

ಜನಪರ ಆಡಳಿತ ನೀಡದ ಬಿಜೆಪಿ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:48 IST
Last Updated 7 ಫೆಬ್ರುವರಿ 2023, 4:48 IST
ಸೇಡಂನಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸ್ತೋಮ
ಸೇಡಂನಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸ್ತೋಮ   

ಸೇಡಂ: ‘ಸೇಡಂನ ಶಾಸಕರು ಅಲ್ಲದೇ ಬಿಜೆಪಿಯ ಎಲ್ಲಾ ಶಾಸಕರು ಲಂಚ ಪಡೆದು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಸೇಡಂ ಅಭಿವೃದ್ಧಿಗೆ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಗೆಲ್ಲಿಸಿ, ಅವರನ್ನು ವಿಧಾನಸೌಧಕ್ಕೆ ಕಳುಹಿಸಿಕೊಡುವ ಅಗತ್ಯವಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ಆಡಳಿತದಲ್ಲಿ ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರಾಗಿ 5 ವರ್ಷ ಒಂದು ಕಪ್ಪು ಚುಕ್ಕೆಯಿಲ್ಲದೇ ಆಡಳಿತ ನಡೆಸಿದ್ದಾರೆ’ ಎಂದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಸ್ಥಳೀಯ ಶಾಸಕರು ಹಾಗೂ ಸಹೋದರರು ಸಿಮೆಂಟ್ ಕಂಪನಿಗಳಲ್ಲಿ ವ್ಯಾಪಾರ ಮಾಡಲು ತೊಡಗಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಜನ ಹೇಳುತ್ತಿದ್ದಾರೆ’ ಎಂದರು.

ADVERTISEMENT

ಶಾಸಕ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬ್ಲಾಕ್ ಕಾಂಗ್ರೆಸ್ ಘಟಕದ ಶಿವಶರಣರೆಡ್ಡಿ, ರವೀಂದ್ರ ನಂದಿಗಾಮ್, ತಿಪ್ಪಣ್ಣಪ್ಪ ಕಮಕನೂರ, ಜಗದೇವಯ್ಯ ಗುತ್ತೇದಾರ, ಶರಣಪ್ಪ ಮಟ್ಟೂರ, ವಿಜಯಕುಮಾರ, ಮಹಾಂತಪ್ಪ ಸಂಗಾವಿ, ಅನಂತಯ್ಯ ಮುಸ್ತಾಜರ್, ನಾಗೇಶ ಕಾಳಾ, ವಿಶ್ವನಾಥ ಪಾಟೀಲ, ನಾಗೇಶ್ವರರಾವ್ ಮಾಲಿ ಪಾಟೀಲ, ಸತೀಶರೆಡ್ಡಿ ರಂಜೋಳ, ಶಂಭುರೆಡ್ಡಿ ಮದ್ನಿ, ಬಸ್ಸಮ್ಮ ಪಾಟೀಲ ಮತ್ತು ಮಹಿಪಾಲರೆಡ್ಡಿ ಮುನ್ನೂರ ಇದ್ದರು.

ಸಿದ್ದರಾಮ್ಯನವರಿಗೆ ಬಂಜಾರ ಸಮುದಾಯದ ಮಹಿಳೆಯರು ವಿಶೇಷ ಕುಡಿಕೆ ತಯಾರಿಸಿ, ನೀಡಿದರು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಎನ್ ಪಿಎಸ್ ಹೋರಾಟ ಸಮಿತಿ ಪದಾಧಿಕಾರಿಗಳಾದ ಬಸವರಾಜ ಸಾಗರ, ಶರಣಬಸವ ಬೆನಕನಹಳ್ಳಿ ಸೇರಿದಂತೆ ಇನ್ನಿತರರು ಆಗಮಿಸಿ ಮನವಿ‌ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.