ಸಿಂಧನೂರು: ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ನಿಧನರಾದ ವಿಷಯ ಗುರುವಾರ ಬೆಳಗಿನ ಜಾವ ಕೇಳಿಬರುತ್ತಿದ್ದಂತೆ ತಾಲ್ಲೂಕಿನ ಭಕ್ತ ಸಮೂಹ ಶೋಕಸಾಗರದಲ್ಲಿ ಮುಳುಗಿತು.
ಮಕರ ಸಂಕ್ರಮಣ ಹಬ್ಬ ಆಚರಣೆ ಬದಿಗಿಟ್ಟು ತಾಲ್ಲೂಕಿನ ತುರ್ವಿಹಾಳ, ಅರಳಹಳ್ಳಿ, ಹೊಸಳ್ಳಿ, ಅಮರಾಪುರ, ಉಪ್ಪಳ, ಮುಕ್ಕುಂದಾ, ಸಾಲಗುಂದಾ, ಜವಳಗೇರ ಸೇರಿದಂತೆ ವಿವಿಧ ಹಳ್ಳಿಗಳಿಂದ ತಿಂಥಣಿ ಬ್ರಿಡ್ಜ್ ಬಳಿ ಇರುವ ಮಠಕ್ಕೆ ತೆರಳಿದರು.
‘ತುರ್ವಿಹಾಳ, ಗುಂಜಳ್ಳಿ, ಅರಳಹಳ್ಳಿ, ಕುರುಕುಂದ ಮತ್ತಿತರ ಗ್ರಾಮಗಳ ಭಕ್ತರೊಂದಿಗೆ ವಿಶೇಷ ಸಂಪರ್ಕ ಇಟ್ಟುಕೊಂಡಿದ್ದ ಸ್ವಾಮೀಜಿ ಅವರು ಮದುವೆ, ಶವಸಂಸ್ಕಾರ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದರಿಂದ ತಾಲ್ಲೂಕಿನ ಭಕ್ತರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಅವರ ನಿಧನದಿಂದ ಹಾಲುಮತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು.
‘ತಿಂಥಣಿ ಬ್ರಿಡ್ಜ್ಗೆ ಸಿದ್ದರಾಮನಂದ ಸ್ವಾಮೀಜಿ ಮಠ ಸ್ಥಾಪನೆ ಮಾಡಿದ ನಂತರ ಕಲಬುರಗಿ ವಿಭಾಗದಲ್ಲಿ ಹಾಲುಮತ ಸಮಾಜಕ್ಕೆ ಶಿಕ್ಷಣ, ಸಾಮಾಜಿಕ, ಧಾರ್ಮಿಕ ಅರಿವು ಮೂಡಿಸುವಲ್ಲಿ ವಿಶೇಷ ಶ್ರಮವಹಿಸಿದ್ದಾರೆ. ಈ ಭಾಗದ ಹಾಲುಮತ ಸಮಾಜಕ್ಕೆ ಧ್ರುವತಾರೆಯಾಗಿ ಬಂದು ನಮ್ಮಿಂದ ಕಣ್ಮರೆಯಾಗಿದ್ದಾರೆ’ ಎಂದು ಹಾಲುಮತ ಸಮಾಜದ ತಾಲ್ಲೂಕ ಘಟಕದ ಅಧ್ಯಕ್ಷ ಕೆ.ಭೀಮಣ್ಣ ವಕೀಲ ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.