ADVERTISEMENT

World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 7:07 IST
Last Updated 15 ಸೆಪ್ಟೆಂಬರ್ 2025, 7:07 IST
   

ತಮ್ಮ ಎಂಜಿನಿಯರಿಂಗ್ ಕೌಶಲಗಳ ಮೂಲಕ ಬೃಹತ್ ಅಣೆಕಟ್ಟುಗಳನ್ನು ಕಟ್ಟುವುದರ ಜೊತೆಗೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾದ ಹಲವು ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಮೈಸೂರು ರಾಜ್ಯಕ್ಕೆ ಸಮೃದ್ಧಿಯನ್ನು ತಂದ, ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಇಡೀ ದೇಶದ ಎಂಜಿನಿಯರುಗಳಿಗೆ ದಾರಿದೀಪವಾಗಿದೆ.

ಕರ್ನಾಟಕದ ಪುಣ್ಯ ಫಲಿಸಿತು, ಭಾರತಾಂಬೆಯ ತಪಸ್ಸು ಫಲಕೊಟ್ಟಿತು, ಜನರ ಭಾಗ್ಯದ ಬಾಗಿಲು ತೆರೆಯಿತು, ನೀರಿನ ದಾಹ ತೀರಿತು, ಸಹಸ್ರ ಪ್ರತಿಭಾನಿತ್ವರ ಆಲೋಚನೆಗಳು, ಲಕ್ಷಯೋಜಕರ ನಿರ್ದಿಷ್ಟ ಯೋಜನೆಗಳು, ಹಲವು ಆಡಳಿತಗಾರರ ಅನುಭವ, ಅನೇಕ ರಾಜರ ರಾಜ್ಯಭಾರದ ಗುಟ್ಟು ಒಂದಾಗಿ ಸೇರಿ ಒಂದು ಮಹಾನ್ ತೇಜೊಮೂರ್ತಿಯಾಗಿ, ಅದಕ್ಕೆ ಸರಸ್ವತಿ ಪ್ರಾಣ ಸಂಚಾರವಾದಾಗ ಅದು ವಿಶ್ವೇಶ್ವರಯ್ಯನವರಾಗಿ ಜೀವ ತಳೆಯಿತು.

ಕ್ರಿ.ಶ 1861ರಿಂದ 1962ರ ವರೆಗೆ ಇಡೀ ವಿಶ್ವದಲ್ಲೆ ಮೊಟ್ಟ ಮೊದಲ ಬಾರಿಗೆ ಆರ್ಥಿಕ ಯೋಜನೆಯ ಕಲ್ಪನೆಯನ್ನು ಪಡೆದು, ಪ್ರತಿಭಾಶಾಲಿ ಎಂಜಿನಿಯರ್ ಮಾತ್ರವಲ್ಲದೆ ಪ್ರಸಿದ್ಧ ಎಂಜಿನಿಯರಾಗಿ, ಕೈಗಾರಿಕೋದ್ಯಮಿಯಾಗಿ, ಸಮರ್ಥ ಆಡಳಿತಗಾರರಾಗಿ, ಕನ್ನಡ ಆಡಳಿತ ಭಾಷೆಗಾಗಿ, ಶಿಕ್ಷಣ ತಜ್ಞರಾಗಿ, ಸಮಾಜ ಸುಧಾರಕರಾಗಿ, ಅಸಮಾನತೆ ಹೋಗಲಾಡಿಸಲು ಬಹುಕಾಲ ಬಾಳಿದವರು (ಶತಾಯುಷಿಗಳಾಗಿ) ವಿಶ್ವೇಶ್ವರಯ್ಯನವರು.

ADVERTISEMENT

ಕರ್ನಾಟಕದಲ್ಲಿ ಅಷ್ಟೇ ಏಕೆ ಇಡೀ ವಿಶ್ವದಲ್ಲಿ ಇವರ ಹೆಸರು ಮನೆಮಾತು ‘ವಿಶ್ವೇಶ್ವರಯ್ಯನವರ ಮೆದುಳು’ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಅಸಾಧಾರಣ ಬುದ್ಧಿಮತ್ತೆಯ ಸೂಚಕ. ವಿಶ್ವೇಶ್ವರಯ್ಯನವರ ಇಡೀ ಜೀವನ ಚರಿತ್ರೆ ಒಂದು ಸಾಹಸಗಾಥೆಯಿದ್ದಂತೆ.

ಕ್ರಿ.ಶ.1861 ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಇವರು ಜನಿಸಿದರು. ತಂದೆ ಶ್ರೀನಿವಾಸ ಶಾಸ್ತ್ರಿಗಳು, ತಾಯಿ ವೆಂಕಟಲಕ್ಷ್ಮಮ್ಮ. ತಂದೆ ಸಂಸ್ಕೃತ ಪಂಡಿತರು, ವೇದಾಂತ ಧುರೀಣರು, ತಾಯಿ ಸುಶೀಲೆ ಸುಸಂಪನ್ನೆ. ವಿಶಾಲವಾದ ಹೃದಯ, ದೈವಭಕ್ತಿ ವಿಶ್ವೇಶ್ವರಯ್ಯನವರಿಗೆ ತಂದೆ ತಾಯಿಗಳಿಂದ ಸಿಕ್ಕ ಆಸ್ತಿ.

ವಿಶ್ವೇಶ್ವರಯ್ಯನವರು 15ನೇ ವರ್ಷ ವಯಸಿದ್ದಾಗ ತಂದೆ ವಿಧಿವಶರಾದರು. ಹೀಗಾಗಿ ಮನೆಯ ಜವಾಬ್ದಾರಿ ವಿಶ್ವೇಶ್ವರಯ್ಯನವರ ಸೋದರಮಾವ ರಾಮಯ್ಯನವರ ಪಾಲಿಗೆ ಬಂದಿತು. ಬೆಂಗಳೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಅನಂತರ ಸೆಂಟ್ರಲ್ ಕಾಲೇಜಿನಲ್ಲಿ ಇವರ ವಿದ್ಯಾಭ್ಯಾಸ ಮುಂದುವರೆಯಿತು. ಇವರಿಗೆ ಹಣದ ಕೊರತೆಯಿಂದ ಹೈಸ್ಕೂಲಿನಲ್ಲಿ ಮತ್ತು ಕಾಲೇಜಿನಲ್ಲಿ ಮನೆ ಪಾಠ ಹೇಳಿದರು. ಎಷ್ಟೋ ಬಾರಿ ಪಾಠ ಹೇಳುವ ಮನೆಯಲ್ಲೋ, ಬೀದಿಯ ದೀಪದ ಕೆಳಗೋ ಕುಳಿತು ಓದಬೇಕಾಗುತ್ತಿತ್ತು. ಸೋದರ ಮಾವನ ಮನೆಯಲ್ಲಿ ಎರಡು ಹೊತ್ತಿನ ಊಟ ಮಾತ್ರ ದೊರೆಯತ್ತಿತ್ತು. ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹಣ ಕಟ್ಟಬೇಕಾಗಿತ್ತು, ಆದರೆ ವಿಶ್ವೇಶ್ವರಯ್ಯನವರ ಹತ್ತಿರ ಹಣ ಇರಲಿಲ್ಲ. ಆದಕಾರಣ ಶಾಲೆ ಮುಗಿಸಿ ಸಂಜೆ ಹೊತ್ತಿಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಮಧ್ಯ ರಾತ್ರಿಯಲ್ಲಿ ಅರಣ್ಯ ಮಧ್ಯದಲ್ಲಿ ಅಂಜದೆ ರಾತ್ರಿ ಇಡೀ ಪ್ರಯಾಣ ಬೆಳೆಸಿ ನಸುಕಿನ ಜಾವ ಮುದ್ದೇನಹಳ್ಳಿಗೆ ತಲುಪಿದರು. ಅಷ್ಟರಲ್ಲಿ ತಾಯಿ ಗಾಬರಿಯಾಗಿ ಕಣ್ಣೀರಿಟ್ಟರು. ವಿಶ್ವೇಶ್ವರಯ್ಯನವರಿಗೆ ವಿಚಾರಿಸಿದಾಗ ಪರೀಕ್ಷೆ ಶುಲ್ಕ ಕಟ್ಟಲು ಹಣ ಬೇಕೆಂದು ಕೇಳಿದರು. ಆ ಸಮಯದಲ್ಲಿ ತಾಯಿ ಹತ್ತಿರ ಸಹ ಹಣ ಇರಲಿಲ್ಲ. ಆದ್ದರಿಂದ ಪಕ್ಕದ ಮನೆ ಶೆಟ್ಟಿಯವರ ಹತ್ತಿರ ಎರವಲು ಮೇಲೆ ಹಣ ಪಡೆದು ವಿಶ್ವೇಶ್ವರಯ್ಯನವರಿಗೆ ಕೊಡುತ್ತಾರೆ. ಅದೇ ಸಮಯದಲ್ಲಿ ಮುದ್ದೇನಹಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಹಣ ಕಟ್ಟುತ್ತಾರೆ. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೊದಲನೆಯವರಾಗಿ ತೇರ್ಗಡೆ ಹೊಂದುತ್ತಾರೆ.

ಒಂದು ದಿವಸ ಸೋದರ ಮಾವನ ಮನೆಗೆ ಊಟಕ್ಕೆ ಹೋದಾಗ ಸೋದರ ಮಾವನ ಹೆಂಡತಿ (ಅತ್ತೆ) ತಿನ್ನಲು ಪುಡಿ ಹಿಟ್ಟು ಕೊಟ್ಟಿರುತ್ತಾರೆ. ಪುಡಿ ಹಿಟ್ಟು ತಿಂದ ವಿಶ್ವೇಶ್ವರಯ್ಯನವರಿಗೆ ಗಂಟಲಿನಲ್ಲಿ ಸಿಲುಕುತ್ತದೆ. ತಕ್ಷಣ ಅತ್ತೆ ನೀರು ತರಲು ಹೋದಾಗ ಒಂದು ಲೋಟ ನೀರು ಸಿಗುವುದಿಲ್ಲ. ವಿಶ್ವೇಶ್ವರಯ್ಯನವರಿಗೆ ಜೀವ ಹೋದಂತೆ ಆಗುತ್ತದೆ. ಆ ಸಮಯದಲ್ಲಿ ಅತ್ತೆ ಗದ್ಗದಿತರಾಗಿ ವಿಶ್ವೇಶ್ ನೋಡಪ್ಪಾ ಒಂದು ಲೋಟದ ನೀರಿಗೆ ಹಾಹಾಕಾರ. ಈ ದೇಶಕ್ಕೆ ನೀರಿಗೆ ಎಷ್ಟು ಬರ ಇದೆ, ನೀರಿನ ಬಗ್ಗೆ ಕಾಳಜಿ ವಹಿಸಪ್ಪಾ ಎಂದು ನುಡಿದು ಒಂದು ಲೋಟ ಹಾಲನ್ನು ಕೋಡುತ್ತಾರೆ. ಹಾಲನ್ನು ಕುಡಿದ ವಿಶ್ವೇಶ್ವರಯ್ಯನವರಿಗೆ ಮರು ಜೀವ ಬಂದ ಹಾಗೆ ಆಗುತ್ತದೆ. ಅದರಂತೆ ವಿಶ್ವೇಶ್ವರಯ್ಯನವರು ಜೀವನ ಪರ್ಯಂತ ನೀರಿಗಾಗಿ ಕಾಳಜಿ ವಹಿಸುತ್ತಾರೆ.

1883ರಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಾರೆ. 1884ರಿಂದ 1908ರವರೆಗೆ ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನಿರ್ವಹಣೆ ಬಳಿಕ ಆತ್ಮ ಗೌರವದಿಂದ ಸ್ವಯಂ ನಿವೃತ್ತಿ ಪಡೆದರು.

1919ರಿಂದ 1959ರ ವರೆಗೆ 40 ವರ್ಷಗಳ ಕಾಲ ಭಾರತ ದೇಶದ ವಿವಿಧ ತಾಂತ್ರಿಕ ಸಲಹಾ ಸಮಿತಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದರು. 1955ರಲ್ಲಿ ದೇಶದ ಅತ್ಯುನ್ನತ ‘ಭಾರತ ರತ್ನ’ ಪದವಿಯನ್ನು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರು ವಿಶ್ವೇಶ್ವರಯ್ಯನವರಿಗೆ ಪ್ರದಾನ ಮಾಡಿದರು.

1962ರ ಏಪ್ರಿಲ್ 14ರಂದು ಈ ಜಗತ್ತಿಗೆ ವಿದಾಯ ಹೇಳಿ ಅಂತಿಮ ಉಸಿರು ಎಳೆದರು. ಆದರೆ, ಅವರು ನಿರ್ಮಿಸಿದ ಅಣೆಕಟ್ಟುಗಳು, ರೂಪಿಸಿದ ನೀರಾವರಿ ಯೋಜನೆಗಳ ಮೂಲಕ ಇಂದಿಗೂ ಅಮರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.