ಕಲಬುರ್ಗಿ: ‘ನಗರದಲ್ಲಿ ತೆರಿಗೆ ಸಂಗ್ರಹ ವಿಳಂಬಾಗುವುದನ್ನು ತಪ್ಪಿಸಲು ನೂತನ ‘ಜಾಣ ವ್ಯವಸ್ಥೆ’ ಜಾರಿಗೆ ತರಲಾಗಿದೆ. ಇದರಿಂದ ವೇಗದ ಸಂಗ್ರಹ ಹಾಗೂ ತೆರಿಗೆ ವಂಚನೆಗೂ ಕಡಿವಾಣ ಬೀಳಲಿದೆ’ ಎಂದು ಪಾಲಿಕೆ ಆಯಕ್ತೆ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಜನರ ಮನೆ ಬಾಗಿಲಿಗೇ ಹೋಗಿ ತೆರಿಗೆ ವಸೂಲಿ ಮಾಡಲು ಅನುಕೂಲವಾಗುವಂಥ ಯಂತ್ರಗಳನ್ನು ನಗರದಲ್ಲಿ ಮಂಗಳವಾರ ಸಿಬ್ಬಂದಿಗೆ ವಿತರಿಸಿ ಅವರು ಮಾತನಾಡಿದರು.
‘ತೆರಿಗೆ ವಸೂಲಿ ಸಿಬ್ಬಂದಿ ಜನರ ಮನೆ ಬಾಗಿಲಿಗೇ ಬರುತ್ತಾರೆ. ಸ್ಥಳದಲ್ಲಿಯೇ ಪಾವತಿ ಮಾಡಿಕೊಳ್ಳಲು ಅನುಕೂಲವಾಗುವಂಥ ಯಂತ್ರಗಳನ್ನು ನೀಡಲಾಗಿದೆ’ ಎಂದರು.
‘ಆಧುನಿಕ ಸಾಫ್ಟ್ವೇರ್ ಒಳಗೊಂಡ 40 ಉಪಕರಣಗಳನ್ನು ಬಿಲ್ ಕಲೆಕ್ಟರ್ ಮತ್ತು ಆರೋಗ್ಯ ನಿರೀಕ್ಷಕರಿಗೆ ನೀಡಲಾಗಿದೆ. ಮೊಬೈಲ್ ಗಾತ್ರದ ಈ ಯಂತ್ರವು ಪ್ರಿಂಟರ್ ಮತ್ತು ಟೈಪಿಂಗ್ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ನಗದು, ವಿವಿಧ ಕಾರ್ಡ್ಗಳು, ಚೆಕ್, ಡಿಡಿ ಮೂಲಕ ಕೂಡ ಪಾವತಿಸಬಹುದು’ ಎಂದರು.
‘ಚಾಲ್ತಿ ತೆರಿಗೆ, ಬಾಕಿ ಮೊತ್ತ, ಅನಧಿಕೃತ ನೀರಿನ ಸಂಪರ್ಕಕ್ಕೆ ಶುಲ್ಕ ನಿಗದಿ, ಅಧಿಕೃತಗೊಳಿಸಿ ಶುಲ್ಕ ಆಕರಿಸುವುದು, ವ್ಯಾಪಾರ ಪರವಾನಗಿ ಶುಲ್ಕ ಮುಂತಾದವನ್ನೂ ಇದರ ಮೂಲಕ ಮಾಡಲಾಗುತ್ತದೆ. ತೆರಿಗೆ ವಂಚನೆಯಾಗಿದ್ದರೆ ಸ್ಥಳದಲ್ಲಿಯೇ ದಂಡ ಹಾಕಲಾಗುತ್ತದೆ. ಜಿಪಿಎಸ್ ವ್ಯವಸ್ಥೆ ಮೂಲಕ ಎಲ್ಲವನ್ನೂ ದಾಖಲುಸಲಾಗುತ್ತದೆ. ಆದ್ದರಿಂದ ಮೋಸಕ್ಕೆ ದಾರಿ ಇಲ್ಲ’ ಎಂದು ಫೌಜಿಯಾ ಮಾಹಿತಿ ನೀಡಿದರು.
‘ನೂತನ ವ್ಯವಸ್ಥೆಯಿಂದ ತೆರಿಗೆ ಪಾವತಿದಾರರಿಗೂ ಅನುಕೂಲ. ಪಾಲಿಕೆಗೆ, ಬ್ಯಾಂಕುಗಳಿಗೆ ಹೋಗುವ ಅಲೆದಾಟ ತಪ್ಪುತ್ತದೆ. ಪಾಲಿಕೆಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿ ಆಗಲಿದೆ’ ಎಂದರು.
ಜಯಕುಮಾರ, ಶಿವಶಂಕರ, ಭೀರಣ್ಣ, ವರ್ಧಮಾನ್, ಎಂ.ಎ.ರೆಹಮಾನ್, ಅಕ್ರಮ, ಮರೆಪ್ಪ ಪೂಜಾರಿ, ಪ್ರಹ್ಲಾದ್ರಾವ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.