ADVERTISEMENT

‘ಮಣ್ಣಿನ ಸವೆತದಿಂದ ಗಂಭೀರ ಬಿಕ್ಕಟ್ಟು’

ಕೃಷಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಬೆಳ್ಳಕ್ಕಿ ಬೇಸರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 14:10 IST
Last Updated 6 ಡಿಸೆಂಬರ್ 2020, 14:10 IST
ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎ.ಬೆಳ್ಳಕ್ಕಿ ಮಾತನಾಡಿದರು
ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎ.ಬೆಳ್ಳಕ್ಕಿ ಮಾತನಾಡಿದರು   

ಕಲಬುರ್ಗಿ: ವಿಶ್ವದಲ್ಲಿನ ಶೀಘ್ರ ಮಣ್ಣಿನ ಸವೆತವು ಮಾನವ ಮತ್ತು ಪ್ರಾಣಿಗಳ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಜಗತ್ತು ಮುಂದೆ ಗಂಭೀರ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಕಲಬುರ್ಗಿಯ ಕೃಷಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎ.ಬೆಳ್ಳಕ್ಕಿ ಎಚ್ಚರಿಕೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ವತಿಯಿಂದ ಸಮಾವೇಶ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಭೂ ಸವೆತದಿಂದ ಪ್ರತಿಶತ 30ರಷ್ಟು ಮಣ್ಣು ಭೂಮಿಯ ಫಲವತ್ತತೆ ಕಳೆದುಕೊಂಡಿದೆ. 2050ರ ವೇಳೆಗೆ ಸುಮಾರು 90ರಷ್ಟು ಮಣ್ಣಿನ ಮೇಲಿನ ಫಲವತ್ತತೆ ಸವೆದು ಹೋಗುತ್ತದೆ ಎಂದರು.

ಒಂದು ಇಂಚು ಮಣ್ಣಿನ ಮೇಲಿನ ಉತ್ಪಾದನೆಗೆ 1000 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸೂಕ್ತವಲ್ಲದ ಬೆಳೆಗಳನ್ನು ಬೆಳೆಯುವ ಮೂಲಕ ಭೂಮಿಯನ್ನು ವಿವೇಚನೆಯಿಲ್ಲದೆ ಬಳಸುವುದರಿಂದ, ಕೃಷಿ ಮಾದರಿಯನ್ನು ಬದಲಾಯಿಸುವ ಪದ್ಧತಿಗೆ ಅಂಟಿಕೊಳ್ಳದಿರುವುದು, ಸುಸ್ಥಿರ ಕೃಷಿಯನ್ನು ಅನುಸರಿಸದಿರುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೃಷಿಯಲ್ಲಿ ಬದಲಾವಣೆ , ಕೈಗಾರಿಕೀಕರಣ ಮತ್ತು ನಗರೀಕರಣಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ಯೋಗ್ಯ ಭೂಮಿ ಕಳೆದುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಮಣ್ಣಿನ ಜೀವಂತ ಜೀವಿಗಳನ್ನು ರಕ್ಷಿಸುವ ಅಗತ್ಯವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಸಮೃದ್ಧಗೊಳಿಸಲು ಸಹಾಯ ಮಾಡುವ ನೈಸರ್ಗಿಕ ಮತ್ತು ಸಾವಯವ ವಸ್ತುಗಳ ಬಳಕೆಯಿಂದ ಮಣ್ಣನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಣ್ಣಿನ ಸವೆತದಿಂದಾಗಿ ಭೂಮಿ ಕೃಷಿಗೆ ಅನರ್ಹವಾಗುತ್ತದೆ ಎಂದರು.

ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು ಮಣ್ಣಿನ ವೈಜ್ಞಾನಿಕ ನಿರ್ವಹಣೆ ಮುಖ್ಯವಾಗಿದೆ. ಮಾನವ ಮತ್ತು ಪ್ರಾಣಿಗಳ ಆಹಾರದ ಶೇ 95ರಷ್ಟು ಆಹಾರವನ್ನು ಪೂರೈಸುವುದರ ಜೊತೆಗೆ, ಮಣ್ಣಿನಲ್ಲಿರುವ ಜೀವಿಯು ಉತ್ಪಾದನೆಗೆ ಪ್ರಮುಖ ಮೂಲವಾಗಿದೆ. ಪ್ರತಿಜೀವಕಣಗಳು ಅನೇಕ ರೋಗಗಳಿಂದ ರಕ್ಷಿಸುತ್ತವೆ ಎಂದರು.

ಸಾವಯವ ಕೃಷಿಯಲ್ಲಿ ಪರಿಣತರಾಗಿರುವ ಡೈರಿ ಸೈನ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿನಾಥ ಆರ್. ಹೆಮ್ಮಾಡಿ ಮಾತನಾಡಿ, ಮಣ್ಣು ವಿಶ್ವದ ಅತ್ಯಂತ ನಿರ್ಲಕ್ಷಿತ ವಿಷಯವಾಗಿದೆ. ಇದನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ಜಗತ್ತಿನಲ್ಲಿ ಜೀವಕ್ಕೆ ಜನ್ಮ ನೀಡಿದ ಮಣ್ಣಿನ ಫಲವತ್ತತೆ. ರಸಗೊಬ್ಬರಗಳು, ಸಸ್ಯನಾಶಕಗಳು ಮತ್ತು ಕೀಟನಾಶಕಗಳ ವಿವೇಚನೆಯಿಲ್ಲದ ಬಳಕೆಯಿಂದ ಮಣ್ಣಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತಿದೆ. ಕೃಷಿಯಲ್ಲಿ ಗೊಬ್ಬರದ ಅತಿಯಾದ ಬಳಕೆಯ ನಂತರ ಐದು ದಶಕಗಳಲ್ಲಿ ಮಣ್ಣಿನ ಫಲವತ್ತತೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಡೀನ್ ಡಾ.ಎಸ್. ಎಚ್ ಹೊನ್ನಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.