ADVERTISEMENT

ಗ್ರಂಥಾಲಯ ಉನ್ನತೀಕರಣಕ್ಕೆ ವಿಶೇಷ ಅಭಿಯಾನ: ನನ್ನ ಜನ ನನ್ನ ಋಣಕ್ಕೆ ಉತ್ತಮ ಸ್ಪಂದನೆ

ಶಿವಾನಂದ ಹಸರಗುಂಡಗಿ
Published 29 ಜನವರಿ 2024, 6:24 IST
Last Updated 29 ಜನವರಿ 2024, 6:24 IST
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ತಾ.ಪಂ ಇಒ ಗಜಾನನ ಬಾಳೆ ಅವರು ಆರಂಭಿಸಿರುವ ‘ನನ್ನ ಜನ ನನ್ನ ಋಣ’ ಅಭಿಯಾನಕ್ಕೆ ಸಮಾಜ ಸೇವಕ ಜೆ.ಎಂ.ಕೊರಬು ₹50 ಸಾವಿರ ದೇಣಿಗೆ ನೀಡಿದರು
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ತಾ.ಪಂ ಇಒ ಗಜಾನನ ಬಾಳೆ ಅವರು ಆರಂಭಿಸಿರುವ ‘ನನ್ನ ಜನ ನನ್ನ ಋಣ’ ಅಭಿಯಾನಕ್ಕೆ ಸಮಾಜ ಸೇವಕ ಜೆ.ಎಂ.ಕೊರಬು ₹50 ಸಾವಿರ ದೇಣಿಗೆ ನೀಡಿದರು   

ಅಫಜಲಪುರ: ತಾಲ್ಲೂಕು ಪಂಚಾಯಿತಿಗೆ ಹೊಸದಾಗಿ ಬಂದ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಜಾನನ್ ಬಾಳೆ ಅಧಿಕಾರ ವಹಿಸಿಕೊಂಡಿದ್ದು ಗ್ರಂಥಾಲಯ ಉನ್ನತೀಕರಣಕ್ಕಾಗಿ ‘ನನ್ನ ಜನ ನನ್ನ ಋಣ’ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ತಾಲ್ಲೂಕಿನ ಬಳ್ಳೂರಗಿ, ಮಾಶಾಳ, ಚೌಡಾಪುರ, ಕರಜಗಿ ನಾಲ್ಕು ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಜ.31ರವರೆಗೆ ಅಭಿಯಾನ ನಡೆಯಲಿದೆ.

ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯನ್ನು ಬಳಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗ ಉನ್ನತೀಕರಣ ಮಾಡುವುದು ಅಭಿಯಾನದ ಉದ್ದೇಶ. ಆಯ್ಕೆಯಾದ ಗ್ರಾಮ ಪಂಚಾಯತಿಗಳಲ್ಲಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ADVERTISEMENT

ತಾಲ್ಲೂಕಿನ ಬಹುತೇಕ ಗ್ರಾಮೀಣ ಗ್ರಂಥಾಲಯಗಳಲ್ಲಿ ಸರಿಯಾದ ಆಸನ, ಪುಸ್ತಕಗಳಿಲ್ಲ. ನಿತ್ಯ ಪತ್ರಿಕೆಗಳು ಬರುವುದಿಲ್ಲ. ಸೌಲಭ್ಯಗಳು ಕಣ್ಮರೆಯಾಗಿವೆ.

‘ಗ್ರಾಮಗಳಲ್ಲಿನ ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ ಮತ್ತು ವ್ಯವಹಾರ ಮಾಡುತ್ತಿರುವವರು, ದೊಡ್ಡ ರೈತರು ದಾನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅನುಕೂಲಸ್ಥರು ಮುಂದೆ ಬರಬೇಕು’ ಎನ್ನುತ್ತಾರೆ ಗ್ರಾಮಸ್ಥರು.

ಮಾಶಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಣಾಭಾಯಿ ಚೌಹಾಣ್, ಸದಸ್ಯ ಶಿವು ಪ್ಯಾಟಿ ಮಾಹಿತಿ ನೀಡಿ, ‘ನಮ್ಮ ಗ್ರಾಮದಲ್ಲಿ ಗ್ರಂಥಾಲಯ ಉನ್ನತೀಕರಣಕ್ಕಾಗಿ ‘ನನ್ನ ಜನ ನನ್ನ ಋಣ’ ಅಭಿಯಾನ ಆರಂಭವಾಗಿದೆ. ₹2 ಲಕ್ಷ ದೇಣಿಗೆ ಸಂಗ್ರವಾಗಿದ್ದು ನಾವು ₹10 ಲಕ್ಷ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು, ಪಿಡಿಒ, ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದೇವೆ. ಜನರು ಸರಿಯಾಗಿ ಸ್ಪಂದನೆ ಮಾಡುತ್ತಿದ್ದು ಗುರಿ ಮುಟ್ಟುತ್ತೇವೆ ಎಂಬ ಭರವಸೆ ಇದೆ’ ಎಂದರು. 

‘ಬಳೂರಗಿ ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಉನ್ನತೀಕರಣಕ್ಕಾಗಿ ವಿಶೇಷ ಅಭಿಯಾನ ಆರಂಭ ಮಾಡಿದ್ದೇವೆ. ದಾನಿಗಳು ಮುಂದೆ ಬಂದು ಧನಸಾಯ ಮಾಡಬೇಕು. ಈಗಾಗಲೇ ಕೆಲವರು ದೇಣಿಗೆ ನೀಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ್ ಹೇರೂರು, ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಸಾಲಿಮಠ ಮನವಿ ಮಾಡಿದ್ದಾರೆ.

ಗ್ರಂಥಾಲಯ ಅಭಿವೃದ್ಧಿಗೆ ಇದು ಒಳ್ಳೆಯ ಅವಕಾಶವಾಗಿದ್ದು ದಾನಿಗಳು ಮುಂದೆ ಬಂದರೆ ಅನುಕೂಲವಾಗುತ್ತದೆ

-ಶಿವು ಪ್ಯಾಟಿ ಗ್ರಾ.ಪಂ ಸದಸ್ಯ ಮಾಶಾಳ

ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿಗೆ ಅಭಿಯಾನ ಆರಂಭವಾಗಿರುವುದು ಸಂತಸ. ಗ್ರಂಥಾಲಯ ಅಭಿವೃದ್ಧಿಯಾದರೆ ಗ್ರಾಮ ಅಭಿವೃದ್ಧಿಯಾದಂತೆ

-ಅಪ್ಪಾಸಾಹೇಬ್ ಪಟೇಲ್ ಗ್ರಂಥಪಾಲಕ ಬಳ್ಳೂರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.