ಕಲಬುರಗಿ: ‘ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ’ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ನುಡಿದರು.
ನಗರದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರೀಡೆಗಳು ಮನಸ್ಸು ತಾಜಾಗೊಳಿಸುತ್ತವೆ. ಕ್ರೀಡೆಯು ಸಮಗ್ರ ಆರೋಗ್ಯವನ್ನು ಸುಧಾರಿಸುತ್ತದೆ. ಕ್ರೀಡಾಂಗಣ ಪ್ರವೇಶಿಸಿದಾಗ ಜಗತ್ತನ್ನು ಮರೆತುಬಿಡುವುದರಿಂದ ಒತ್ತಡ ಕಡಿಮೆಯಾಗುತ್ತದೆ’ ಎಂದರು.
ಕೆಬಿಎನ್ ವಿವಿಯ ಕುಲಸಚಿವ ಮೀರ್ ವಿಲಾಯತ್ ಅಲಿ ಮಾತನಾಡಿ, ‘ಆಟಗಳಲ್ಲಿ ಗೆಲ್ಲುವುದು–ಸೋಲುವುದು ಮುಖ್ಯವಲ್ಲ. ನ್ಯಾಯೋಚಿತ ಆಟ ಮುಖ್ಯ. ಪಾಲ್ಗೊಳ್ಳುವಿಕೆಯೇ ನಿಜವಾದ ಗೆಲುವು’ ಎಂದರು.
ಕ್ರೀಡಾ ಜ್ಯೋತಿ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧೀಸಲಾಯಿತು.
ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೇರಂ, ಚೆಸ್, ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್, ಶಾಟ್ಪಟ್, ರಂಗೋಲಿ, ಮೆಹಂದಿ, ಪೇಂಟಿಂಗ್, ಪೋಸ್ಟರ್, ಗಾಯನ, ನೃತ್ಯ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸೂಫಿಯಾನ್ ಪ್ರಾರ್ಥಿಸಿದರೆ, ವಿದ್ಯಾರ್ಥಿ ಕಲ್ಯಾಣ ಡೀನ್ ಅನೂಪ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮಾರೂಫ ವಂದಿಸಿದರು. ಗಣಿತ ವಿಭಾಗದ ಮುಖ್ಯಸ್ಥೆ ಸನಾ ಇಜಾಜ್ ನಿರೂಪಿಸಿದರು.
ವಿವಿಯ ಅಕ್ಯಾಡೆಮಿಕ್ ಡೀನ್ ಜಮಾ ಮೂಸ್ವಿ, ಮೆಡಿಕಲ್ ಡೀನ್ ಡಾ.ಗುರು ಪ್ರಸಾದ, ಎಂಜಿನಿಯರಿಂಗ್ ಡೀನ್ ಪ್ರೊ.ಸುಭಾಸ ಕಮಲ, ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಮತ್ತು ಕಾನೂನು ವಿಭಾಗದ ಡೀನ್ ನಿಶಾತ್ ಆರೀಫ್ ಹುಸೇನಿ, ಶಿಕ್ಷಣ ಡೀನ್ ಮೊಹ್ಮದ್ ಇಕ್ಬಾಲ್, ವಾಣಿಜ್ಯ ಡೀನ್ ಪ್ರೊ.ಶ್ರೀನಿವಾಸ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.