ADVERTISEMENT

ಕೋವಿಡ್‌ ನಿಯಂತ್ರಣ ಮಾಡದ ಸರ್ಕಾರ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 16:02 IST
Last Updated 10 ಜುಲೈ 2020, 16:02 IST

ಕಲಬುರ್ಗಿ: ‘ರಾಜ್ಯದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ನಿಯಂತ್ರಣಕ್ಕೆ ಅಗತ್ಯ ವೈದ್ಯರ ತಂಡ, ಆರೋಗ್ಯ ಸಿಬ್ಬಂದಿ ಹಾಗೂ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಎಡವವಿದೆ. ಇದರಿಂದ ಜನರನ್ನು ಆತಂಕ್ಕೆ ತಳ್ಳಿದೆ’ ಎಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್. ವಿ. ದಿವಾಕರ್ ದೂರಿದ್ದಾರೆ.

‘ಸೋಂಕು ಹತೋಟಿಗೆ ತಂದು ಜನರನ್ನು ಕಾಪಾಡಬೇಕಾದ ಸರ್ಕಾರವೇ ಸುಮಾರು ₹ 2 ಸಾವಿರ ಕೋಟಿಯಷ್ಟು ಹಗರಣ ಮಾಡಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಅನುವಾಗುವಂತೆ, ಖಾಸಗಿ ಆಸ್ಪತ್ರೆಗಳ ಸಮಸ್ಯೆಗಳನ್ನು ಪರಿಹರಿಸುವ ಅಧಿಕಾರವುಳ್ಳ ಉನ್ನತ ಸಮಿತಿ ರಚಿಸಬೇಕು, ಕ್ಯಾನ್ಸರ್, ಹೃದ್ರೋಗ, ಕಿಡ್ನಿ ಸಮಸ್ಯೆ ಮುಂತಾದ ಕಾಯಿಲೆ ಉಳ್ಳವರಿಗೆ ಮತ್ತು ಹೆರಿಗೆಗೆ ಬರುವವರಿಗೆ ಯಾವುದೇ ಅಡ್ಡಿಯಾಗದಂತೆ ಒಂದು ಪ್ರೊಟೋಕಾಲ್ ಜಾರಿಗೆ ತರಬೇಕು, 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮತ್ತು ಇತರ ಇಲಾಖೆಗಳ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ರೋಗಿಗಳನ್ನು ಸಾಗಿಸಲು ಬೇಕಾದಷ್ಟು ಆಂಬುಲೆನ್ಸ್‌ಗಳನ್ನು ವಿವಿಧ ಮೂಲಗಳಿಂದ ರಾಜ್ಯದಾದ್ಯಂತ ಸಿದ್ಧಪಡಿಸಿಕೊಳ್ಳಬೇಕು, ಸ್ವಚ್ಛತಾ ನೌಕರರು ಸೇರಿದಂತೆ ಕೋವಿಡ್ ನಿಯಂತ್ರಣದಲ್ಲಿ ಹೋರಾಡುತ್ತಿರುವ ಎಲ್ಲಾ ಮುಂಚೂಣಿ ಯೋಧರಿಗೆ ಅವಶ್ಯಕತೆ ಇರುವಷ್ಟು ಸುರಕ್ಷತಾ ಸಾಧನಗಳನ್ನು ಒದಗಿಸಬೇಕು, ವೇತನ ಹೆಚ್ಚಳ, ಕಾಯಂ ಮಾಡುವಂತಹ ಅವರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.