
ಕಲಬುರಗಿ: ‘ಶಾಲಾ, ಕಾಲೇಜು ಆವರಣ ಸ್ವಚ್ಛತೆಯೆಂದರೆ, ಉತ್ತಮ ಆರೋಗ್ಯ, ಮಾನಸಿಕ ಸ್ಪಷ್ಟತೆ ಮತ್ತು ಶಿಸ್ತು ಬೆಳೆಸುವ ಒಂದು ಮಹತ್ವದ ಅಭ್ಯಾಸವಾಗಿದೆ’ ಎಂದು ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.
ನಗರದ ಹೈಕ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಲ್ಲಿ ಹಮ್ಮಿಕೊಂಡಿದ್ದ ಶ್ರಮದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ವಚ್ಛತೆಗಾಗಿ ಕಸವನ್ನು ಸರಿಯಾದ ಕಸದ ಬುಟ್ಟಿಯಲ್ಲಿ ಹಾಕುವುದು, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವುದು, ತರಗತಿ–ಶೌಚಾಲಯ ಸ್ವಚ್ಛವಾಗಿರಿಸುಕೊಳ್ಳುವುದು ಮತ್ತು ಶಾಲಾ ಆವರಣದಲ್ಲಿ ಗಿಡ ಬೆಳೆಸುವುದು ಸೇರಿ ಮುಂತಾದ ಕ್ರಮ ಕೈಗೊಳ್ಳಬೇಕು. ಅವುಗಳನ್ನು ಎಲ್ಲರೂ ಒಟ್ಟು ಮಾಡಿದರೆ ಆರೋಗ್ಯಕರ ಮತ್ತು ಸಂತೋಷಕರ ಕಾಲೇಜು ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.
‘ಸಂಸ್ಥೆಯ ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 7 ದಿನಗಳವರೆಗೆ ಸ್ವಚ್ಛತಾ ಶ್ರಮದಾನ ನಡೆಯುತ್ತಿದೆ. ಕೇವಲ ಇದು ರಾಷ್ಟ್ರೀಯ ಸೇವಾ ಯೋಜನೆ ಒಂದು ಕಾರ್ಯಕ್ರಮವಲ್ಲ. ನಮ್ಮ ಸಂಸ್ಥೆಯ ಪ್ರತಿ ಶಾಲೆ–ಕಾಲೇಜುಗಳು, ಆವರಣ, ಕೋಣೆಗಳನ್ನು ಸ್ವಚ್ಛವಾಗಿರಿಸಿ, ಪರಿಸರ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕ ಡಾ.ಅನಿಲಕುಮಾರ ಪಟ್ಟಣ ಮಾತನಾಡಿ, ‘ಸ್ವಚ್ಛತಾ ಶ್ರಮದಾನ ಶಿಬಿರ ಕೇವಲ 7 ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿ ನಡೆಯಬೇಕು’ ಎಂದು ಹೇಳಿದರು.
ಈಚೆಗೆ ನಿಧನರಾದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಗೌರವಾರ್ಥ ಮೌನಾಚರಣೆ ಮಾಡಲಾಯಿತು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ಗುರುಲಿಂಗಪ್ಪ ಪಾಟೀಲ, ಪ್ರಾಚಾರ್ಯರಾದ ಡಾ.ಜಯಶ್ರೀ ಮುದ್ದಾ, ಸಂಸ್ಥೆಯ ಐಕ್ಯೂಎಸಿ ಸಂಚಾಲಕಿ ಡಾ.ಉಮಾ ರೇವೂರ, ಡಾ.ಸುಧಾ ಹಾಲಕಾಯಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಸುಭಾಷ್ ಪಾಟೀಲ, ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದ ಎನ್ಎಸ್ಎಸ್ ಅಧಿಕಾರಿಗಳಾದ ಡಾ.ಸುಭಾಷ್ ದೊಡಮನಿ, ಡಾ.ಶ್ರೀದೇವಿ ಸರಡಗಿ, ಡಾ.ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಶ್ರಮದಾನ ಶಿಬಿರದಲ್ಲಿ ವಿ.ಜಿ. ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.