ADVERTISEMENT

ಗ್ರಾ.ಪಂ ಚುನಾವಣೆಗೆ ತಾಲ್ಲೂಕು ಆಡಳಿತ ಸನ್ನದ್ಧ: ಚಿಂಚೋಳಿ ತಹಶೀಲ್ದಾರ್

ಚಿಂಚೋಳಿ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 2:07 IST
Last Updated 4 ನವೆಂಬರ್ 2020, 2:07 IST
ತರಬೇತಿ ಶಿಬಿರದಲ್ಲಿ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿದರು
ತರಬೇತಿ ಶಿಬಿರದಲ್ಲಿ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿದರು   

ಚಿಂಚೋಳಿ: ಗ್ರಾಮ ಪಂಚಾಯಿತಿ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದಾಗಿದೆ. ಇದಕ್ಕಾಗಿ ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಇಲ್ಲಿನ ಸಿ.ಬಿ.ಪಾಟೀಲ ಕಾಲೇಜಿನ ಸಭಾಂಗಣದಲ್ಲಿ ಚುನಾವಣಾಧಿ ಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತಿಯಲ್ಲಿ ಹೇಳುವ ವಿಷಯ ಮನದಟ್ಟು ಮಾಡಿಕೊಂಡರೆ ಚುನಾವಣೆ ಸಲೀಸಾಗಿ ನಡೆಸಿಕೊಂಡು ಹೋಗಲು ತೊಂದರೆಯಾಗುವುದಿಲ್ಲ. ಈಗ ಉದಾಸೀನ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ ನಿವಾರಿಸಿಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಚುನಾವಣಾ ಸಿಬ್ಬಂದಿ ಜವಾಬ್ದಾರಿ ಆಗಿರುವುದರಿಂದ ತರಬೇತಿಯನ್ನು ಪರಿಪೂರ್ಣವಾಗಿ ಪಡೆದುಕೊಳ್ಳಬೇಕು ಎಂದರು.

ADVERTISEMENT

ಚುನಾವಣೆಯ (ಮಾಸ್ಟರ್ ಟ್ರೇನರ್) ಸಂಪನ್ಮೂಲ ವ್ಯಕ್ತಿ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ, ನಾಗಶೆಟ್ಟಿ ಭದ್ರಶೆಟ್ಟಿ, ರೇವಣಸಿದ್ದಪ್ಪ ದಂಡಿನ್, ಜಯಪ್ಪ ಚಾಪಲ್, ಡಾ. ಸಂಗಪ್ಪ ಮಾಮನಶೆಟ್ಟಿ ತರಬೇತಿ ನೀಡಿದರು.

ತಾ.ಪಂ ಇಒ ಅನಿಲಕುಮಾರ ರಾಠೋಡ್, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಕಿಶೋರಕುಮಾರ ಕುಲಕರ್ಣಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ್, ಚುನಾವಣಾ ಶಾಖೆಯ ಕೇದರನಾಥ ಬಿರಾದಾರ, ಮಲ್ಲಿಕಾರ್ಜುನ ಶಂಕರ ಇದ್ದರು.

ಉಪಚುನಾವಣೆಯ ಸಿಬ್ಬಂದಿಗೆ ಹಣ ಬಾಕಿ !

ಚಿಂಚೋಳಿ: 2019ರಲ್ಲಿ ನಡೆದ ಚಿಂಚೋಳಿ ಉಪ ಚುನಾವಣೆಯಲ್ಲಿ ಸೇವೆ ಸಲ್ಲಿಸಿದ ಚುನಾವಣಾ ಸಿಬ್ಬಂದಿಗೆ ವರ್ಷ ಕಳೆದರೂ ಹಣ ಬಂದಿಲ್ಲ.

ಮಂಗಳವಾರ ಏರ್ಪಡಿಸಿದ್ದ ತರಬೇತಿಯಲ್ಲಿ ಈ ಬಗ್ಗೆ ಕೆಲವು ನೌಕರರು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಗಮನಕ್ಕೆ ವಿಷಯ ತಂದಾಗ,‘ ಹಣ ಬಾಕಿ ಇರುವುದು ನನಗೆ ಈಚೆಗೆ ಗೊತ್ತಾಗಿದೆ. ತಕ್ಷಣ ನಾನು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದೇನೆ. ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ಅಗತ್ಯವಾದ ₹13 ಲಕ್ಷ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.