ಚಿಂಚೋಳಿ: ತಾಲ್ಲೂಕಿನ ಶೇರಿಭಿಕನಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುರಾಜ ಕುಲಕರ್ಣಿ ಎಂಬ ಶಿಕ್ಷಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕುಡಿದ ಮತ್ತಿನಲ್ಲಿ ಅವಾಚ್ಯವಾಗಿ ನಿಂದಿಸಿದ ವಿಡಿಯೊ ಹರಿದಾಡುತ್ತಿದೆ.
1 ನಿಮಿಷ 29 ಸೆಕೆಂಡ್ನ ವಿಡಿಯೊದಲ್ಲಿ, ‘ಇಲಾಖೆಯ ಅಧಿಕಾರಿಗಳೆಲ್ಲ ಹಣಕ್ಕಾಗಿ ಪೀಡಿಸುತ್ತಿದ್ದು ಭ್ರಷ್ಟರಾಗಿದ್ದಾರೆ. ನಾನು ಬೈದರೆ ನನ್ನನ್ನು ಸಸ್ಪೆಂಡ್ ಮಾಡುತ್ತಾರೆ. ಮಾಡಿದರೂ ನನಗೇನು ಚಿಂತೆ ಇಲ್ಲ. ಅರ್ಧ ಪಗಾರ ಬರುತ್ತದೆ. ವರ್ಗಾವಣೆ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದರ ಬದಲು ಅಮಾನತಾಗಿ ವರ್ಗಾವಣೆಯಾಗುವುದು ಶಾರ್ಟ್ ಕಟ್ ದಾರಿಯಾಗಿದೆ’ ಎಂಬ ಮಾತುಗಳು ವಿಡಿಯೊದಲ್ಲಿವೆ. ಶಿಕ್ಷಕನ ಎದುರಿಗೆ ಮದ್ಯ ತುಂಬಿದ ಗ್ಲಾಸ್ ಕಾಣಿಸುತ್ತಿದ್ದು, ವಿಡಿಯೊದಲ್ಲಿ ಧೂಮಪಾನ ಮಾಡುವುದೂ ದಾಖಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ, ‘ಶಿಕ್ಷಕನೊಬ್ಬ ಮದ್ಯ ಸೇವಿಸಿ ಧೂಮಪಾನ ಮಾಡುತ್ತಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಗೆಗೆ ಕೆಟ್ಟ ಪದಗಳನ್ನು ಬಳಸಿರುವ ವಿಡಿಯೊ ಎಲ್ಲೆಡೆ ಹರಿದಾಡಿದ್ದು, ಆ ಶಿಕ್ಷಕನನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಗುರುರಾಜ ಕುಲಕರ್ಣಿ ಇದಕ್ಕೂ ಮುಂಚೆ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಶಾಲೆಯಲ್ಲಿದ್ದರು. ಇಂತಹ ದುರ್ನಡತೆಯ ಕಾರಣಕ್ಕೆ ಅಮಾನತು ಮಾಡಿ ಚಿಂಚೋಳಿ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.