ಕಲಬುರ್ಗಿ: ಜಿಲ್ಲೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಶಿಕ್ಷಕಿಯರು ಹಾಗೂ ಆಯಾಗಳಿಗೆ ಬಾಕಿ ಉಳಿಸಿಕೊಂಡಿರುವ ಗೌರವ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಶಿಕ್ಷಕಿಯರು ಹಾಗೂ ಆಯಾಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
2019–20ನೇ ಸಾಲಿನಲ್ಲಿ ಎಲ್ಕೆಜಿ ತರಗತಿಗಳಿಗೆ ಶಿಕ್ಷಕಿಯರು, ಆಯಾಗಳು ಆಯ್ಕೆಯಾಗಿದ್ದು, ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇವೆ. ಪ್ರಸ್ತುತ ಸಾಲಿನಲ್ಲಿ ಯುಕೆಜಿ ಶಿಕ್ಷಕಿಯರಾಗಿ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ 2020–21ನೇ ಸಾಲಿನ ವೇತನ ಅನುದಾನವೂ ಬಿಡುಗಡೆಯಾಗಿದೆ. ಶಾಲೆಯ ಆರಂಭದ ನಂತರ ಗೌರವ ಧನ ನೀಡುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇಲ್ಲಿಯವರೆಗೂ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಏಳು ತಿಂಗಳಿಂದ ಗೌರವ ಧನ ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈಗಾಗಲೇ ಗೌರವ ಧನವು ಕೆಪಿಎಸ್ ಶಾಲಾ ಖಾತೆಗೆ ಬಂದು ತಲುಪಿದ್ದು, ಆದರೆ, ಗೌರವ ಧನ ವಿತರಿಸುವ ಆದೇಶ ನೀಡಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ಗೌರವ ಧನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಶಿಕ್ಷಕಿಯರಾದ ಯಾಸ್ಮಿನ್, ಚಂದ್ರಕಲಾ, ಜ್ಯೋತಿ, ಇಂದು, ಮಧು, ಸವಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.