ADVERTISEMENT

ಶಿವಶಕ್ತಿ, ನವದುರ್ಗೆಯವರ ದೇವಸ್ಥಾನ ಉದ್ಘಾಟನೆ ಫೆ. 7ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 13:42 IST
Last Updated 29 ಜನವರಿ 2022, 13:42 IST
ಶಿವಶಕ್ತಿ, ನವದುರ್ಗೆಯವರ ದೇವಸ್ಥಾನ
ಶಿವಶಕ್ತಿ, ನವದುರ್ಗೆಯವರ ದೇವಸ್ಥಾನ   

ಕಲಬುರಗಿ: ಆಳಂದ ತಾಲ್ಲೂಕಿನ ಧುತ್ತರಗಾಂವ ಗ್ರಾಮದಲ್ಲಿ ಫೆಬ್ರುವರಿ 7ರಂದು ಶಿವಶಕ್ತಿ ಹಾಗೂ ನವದುರ್ಗೆಯರ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ರೈತ ಮುಖಂಡ ಹಾಗೂ ದೇವಸ್ಥಾನ ನಿರ್ಮಾತೃ ಚಂದ್ರಶೇಖರ ಎಸ್. ಹಿರೇಮಠ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪನೆ, ಧರ್ಮ ಚಿಂತನೆ, ಶಿವಭೂಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯರು ವಹಿಸಲಿದ್ದು, ಮುಗಳಖೋಡ, ಜಿಡಗಾ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಲವಾರ ಕೋರಿಸಿದ್ದೇಶ್ವರ ಮಠದ ಡಾ. ಸಿದ್ಧತೋಟೇಂದ್ರ ಸ್ವಾಮೀಜಿ, ಮಲಕೂಡದ ಗುರುಲಿಂಗ ಶಿವಾಚಾರ್ಯರು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಮುಗುಳನಾಗಾಂವದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಭಾಗವಹಿಸುವರು’ ಎಂದರು.

‘ನನ್ನ ತಂದೆ ಶಿವಬಸವ ಹಿರೇಮಠ ಅವರ ಸಂಕಲ್ಪದಂತೆ ಹಿರೇಮಠ ಪರಿವಾರದವರು ಈ ದೇವಸ್ಥಾನವನ್ನು ನಿರ್ಮಿಸಿದ್ದೇವೆ. ಹಿರಿಯ ಪತ್ರಕರ್ತ ಗಂಗಾಧರ ಕುಷ್ಟಗಿ ಅವರಿಗೆ ‘ಶಿವಭೂಷಣ ರತ್ನ’ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ಇದೇ 23ರಿಂದ ಫೆ 7ರವರೆಗೆ ನಿತ್ಯ ಶತರುದ್ರಾಭಿಷೇಕ, ಜಂಗಮಾರ್ಚನೆ, ಶಿವಲಿಂಗ ಪ್ರತಿಷ್ಠಾಪನೆ, ಸಹಸ್ರ ಬಿಲ್ವಾರ್ಚನೆ, ಜಂಗಮ ಗಣಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಫೆಬ್ರುವರಿ 1ರಂದು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ, ವೈದಿಕ ಪೂಜೆ ಪ್ರಾರಂಭೋತ್ಸವ ನೆರವೇರಲಿದೆ. ಫೆ 3ರಂದು ಬೆಳಿಗ್ಗೆ 8ಕ್ಕೆ ದೇವಿಯ ಮೂರ್ತಿ ಪ್ರತಿಷ್ಠಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ ನೆರವೇರಲಿವೆ. ಫೆ 4ರಂದು ಬೆಳಿಗ್ಗೆ 8ಕ್ಕೆ ಚಂಡಿಕಾ ಹೋಮದ ‍ಪೂರ್ಣಾಹುತಿ, ದೇವಿಗೆ ಕಲಾಭಿಷೇಕ, ಮಹಾನೈವೇದ್ಯ, ಮಹಾಮಂಗಳಾರತಿ ನೆರವೇರಲಿದೆ ಎಂದು ಹೇಳಿದರು.

ಫೆ 7ರಂದು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಲಿದ್ದಾರೆ ಎಂದರು.

ಪತ್ರಕರ್ತ ಗಂಗಾಧರ ಕುಷ್ಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.