ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿರುವ ಗೃಹ ಮಂಡಳಿ ಬಡಾವಣೆಯಲ್ಲಿ ಪಕ್ಷಿಗಳ ಹಿಂಡು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ಪ್ರೇಮಿಗಳಿಗೆ ಮುದ ನೀಡುತ್ತಿದೆ.
ಮೈಕೊರೆಯುವ ಚಳಿಯಿಂದ ಗೂಡು ಬಿಟ್ಟು ಬರುವ ಸಹಸ್ರಾರು ಗುಬ್ಬಚ್ಚಿಗಳು ಸಂಸದ ಡಾ.ಉಮೇಶ ಜಾಧವ ನಿವಾಸದಿಂದ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧನರಾಜ ಬೊಮ್ಮಾ ಮತ್ತು ರೇವಣಸಿದ್ದ ಗೌಡನಹಳ್ಳಿ ಅವರ ಮನೆವರೆಗೂ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಗೋಚರಿಸುತ್ತವೆ.
ಈ ಹಕ್ಕಿಯನ್ನು ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಸಾಲಿನಲ್ಲಿ ಪರಿಗಣಿಸಲಾಗಿದೆ. ವಿಪರೀತ ಶೀತಗಾಳಿ ಹಾಗೂ ಮೈಕೊರೆಯುವ ಚಳಿ ಕಾರಣ ದೇಹವನ್ನು ಕಾವು ಮಾಡಿಕೊಳ್ಳಲು ಇಲ್ಲಿಗೆ ಬರುವ ಗುಬ್ಬಿಗಳು ವಿದ್ಯುತ್ ತಂತಿಗಳ ಮೇಲೆ ಗಂಟೆಗಟ್ಟಲೇ ಕುಳಿತಿರುತ್ತಿವೆ.
ಇವುಗಳೊಂದಿಗೆ ಕಾಡು ಗುಬ್ಬಿ ಹಾಗೂ ಊರು ಗುಬ್ಬಿಗಳೂ ಇವೆ.ಇಲ್ಲಿ ಪ್ರತಿ ವರ್ಷ ಗುಬ್ಬಚ್ಚಿಗಳ ಹಿಂಡು ಚಳಿಗಾಲದಲ್ಲಿ ಬಂದು ಸೂರ್ಯನ ಕಿರಣಗಳಿಗೆ ಮೈಯೊಡ್ಡುತ್ತವೆ. ಸಾಮಾನ್ಯವಾಗಿ ಒಂದು ತಿಂಗಳವರೆಗೂ ಇಲ್ಲಿ ಗುಬ್ಬಚ್ಚಿಗಳು ಕಾಣಸಿಗುತ್ತವೆ. ನಂತರ ಅವು ತಮ್ಮ ಮೂಲಸ್ಥಾನಗಳಿಗೆ ತೆರಳುತ್ತವೆ.ಮರಗಿಡಗಳ ಹಾಗೂ ಜನವಸತಿ ರಹಿತ ಕಟ್ಟಡಗಳ ಮೇಲೆ ನೆಲೆಸುವ ಗುಬ್ಬಚ್ಚಿಗಳು ಬೆಳಿಗ್ಗೆ ಚಿಲಿಪಿಲಿಗುಟ್ಟುತ್ತ ಬೆಳಗಿನ ಅನುಭೂತಿ ನೀಡುತ್ತಿವೆ. ಆದರೆ ವರ್ಷದಲ್ಲಿ 11 ತಿಂಗಳು ಈ ಗುಬ್ಬಚ್ಚಿಗಳು ಒಂದೇ ಕಡೆ ಗೋಚರಿಸುವುದೇ ಇಲ್ಲ.
ಮೊಬೈಲ್ ಟವರ್ಗಳು ಸೂಸುವ ಕಿರಣಗಳು ಗುಬ್ಬಚ್ಚಿಗಳ ಜೀವಕ್ಕೆ ಕುತ್ತು ತಂದಿವೆ ಎಂಬ ಮಾತು ಕೇಳಿ ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.