
ಅಫಜಲಪುರ: ತಾಲ್ಲೂಕಿನ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶಾಂತಲಿಂಗ ಶಿವಾಚಾರ್ಯರು ಭಾನುವಾರ ಸಾಯಂಕಾಲ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಾಮೀಜಿ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಒಂದು ವರ್ಷದ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಮಧ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡು ಮಠದಿಂದಲೇ ಪರಾರಿಯಾಗಿದ್ದರು. ಸ್ವಾಮೀಜಿ ಇತ್ತೀಚೆಗೆ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಮಠದ ಜಾತ್ರೆ ಇರುವ ಸಂದರ್ಭದಲ್ಲಿ ‘ಈ ಮಠಕ್ಕೆ ನಾನೇ ಮಠಾಧಿಪತಿ ಇದ್ದೇನೆ, ಹೀಗಾಗಿ ಜಾತ್ರೆ ಸಂದರ್ಭದಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಡಲು ಅವಕಾಶ ನೀಡಬೇಕೆಂದು’ ಪೊಲೀಸ್ ಭದ್ರತೆಯೊಂದಿಗೆ ಗ್ರಾಮಕ್ಕೆ ಬಂದು ಜಾತ್ರೆಯ ವಿಧಿ ವಿಧಾನಗಳನ್ನು ಗ್ರಾಮಸ್ಥರ ವಿರೋಧದ ನಡುವೆಯು ನಡೆಸಿದ್ದರು. ಅಲ್ಲದೇ ಗ್ರಾಮಸ್ಥರು ಸಹ ಜಾತ್ರೆ ಮುಗಿಯಲಿ ಮುಂದೆ ಎಲ್ಲರೂ ಸೇರಿ ಚರ್ಚೆ ಮಾಡಿ ಹೊಸ ಪೀಠಾಧಿಪತಿಗಳನ್ನು ನೇಮಕ ಮಾಡೋಣ ಎಂದು ತೀರ್ಮಾನಿಸಿ ಜಾತ್ರೆ ನಡೆಸಿ ಕೊಟ್ಟಿದ್ದರು.
ಆದರೆ, ಈಗ ಸ್ವಾಮೀಜಿ ಮಠದ ಆವರಣದಲ್ಲೇ ನಿಂತುಕೊಂಡು ಭಾನುವಾರ ಸಾಯಂಕಾಲ ಸಿಂಗಲ್ ಬ್ಯಾರೆಲ್ ಗನ್ನಿಂದ ಗುಂಡು ಹಾರಿಸಿದ್ದಾರೆ. ವಿರೋಧಿಗಳನ್ನು ಭಯಪಡಿಸಲು ಗುಂಡು ಹಾರಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.