ADVERTISEMENT

ಟಂಟಂ– ಬೈಕ್‌ ಡಿಕ್ಕಿ: ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:22 IST
Last Updated 23 ನವೆಂಬರ್ 2020, 4:22 IST

ಕಲಬುರ್ಗಿ: ನಗರದ ಹೊರವಲಯದ ತಾಜ್ ಸುಲ್ತಾನಪುರ ಬಳಿ ಭಾನುವಾರ ಬೈಕಿಗೆ ಟಂಟಂ ಆಟೊ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ.

ಇಲ್ಲಿನ ರಾಜಾಪುರ ನಿವಾಸಿಗಳಾದ ರಮೇಶ ಸರಡಗಿ, ಅವರ ಪುತ್ರ 10 ವರ್ಷದ ಅರ್ಜುನ ಹಾಗೂ ಶಿವಲಿಂಗ ಧಾಬಿಮನಿ ಗಾಯಗೊಂಡವರು.

ಬಾಲಕ ಅರ್ಜುನ ದೀಪಾವಳಿ ಹಬ್ಬಕ್ಕೆಂದು ಕಲ್ಲಹಂಗರಗಾ ಗ್ರಾಮದಲ್ಲಿರುವ ಅಜ್ಜನ ಮನೆಗೆ ಹೋಗಿ ಅಲ್ಲೇ ಉಳಿದುಕೊಂಡಿದ್ದ. ಈತನನ್ನು ಕರೆದುಕೊಂಡು ಬರಲು ಭಾನುವಾರ ರಮೇಶ ಮತ್ತು ಶಿವಲಿಂಗ ಹೋಗಿದ್ದರು. ಮರಳಿ ಮೂವರು ಒಂದೇ ಬೈಕಿನಲ್ಲಿ ಬರುತ್ತಿದ್ದಾಗ ತಾಜ್ ಸುಲ್ತಾನಪುರ ಸಮೀಪದ ತಿರುವಿನಲ್ಲಿ ವೇಗವಾಗಿ ಬಂದ ಟಂಟಂ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಬಾಲಕ ಅರ್ಜುನನ ಬಲಗೈ -ಕಾಲು ಮುರಿದಿದೆ. ತಲೆಗೂ ಪೆಟ್ಟು ಬಂದಿದೆ. ರಮೇಶನ ಬಲಗೈ ರಟ್ಟೆ ಮುರಿದಿದೆ. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಸ್ಥಳೀಯರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಟಂಟಂ ಚಾಲಕ ಪರಾರಿಯಾಗಿದ್ದು, ನಗರ ಸಂಚಾರಿ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.