ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರದ ಅಷ್ಟ ತೀರ್ಥದಲ್ಲಿ ಮಂಗಳವಾರ ಸ್ನಾನ ಮಾಡಲು ಬಂದಿದ್ದ ಇಬ್ಬರು ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ನದಿಗೆ ಬಿದ್ದಿದ್ದ ದೇವಲ ಗಾಣಗಾಪುರದ ಪ್ರಕಾಶ್ ವಾಘ್ಮೋರೆ (18) ಹಾಗೂ ಸಕ್ಷಮ ಕೋಳಿ (16) ನಾಪತ್ತೆಯಾಗಿದ್ದಾರೆ.
ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದ ಹಿಂದಿರುವ ಭೀಮಾ ನದಿಯ ಅಷ್ಟ ತೀರ್ಥಗಳಲ್ಲಿ ಒಂದಾಗಿರುವ ಪಾಪನಾಶ ತೀರ್ಥದಲ್ಲಿ ಸ್ನಾನ ಮಾಡಲು ಇವರು ಬಂದಿದ್ದರು. ಸಕ್ಷಮ ಕೋಳಿ ಸ್ನಾನ ಮಾಡುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರಿಗೆ ಈಜು ಬರುತ್ತಿರಲಿಲ್ಲ. ಈಜು ಗೊತ್ತಿದ್ದ ಪ್ರಕಾಶ್ ವಾಘ್ಮೋರೆ ಅವರು ಸಕ್ಷಮ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಕ್ಷಮ ಅವರು ಪ್ರಕಾಶ ಅವರ ಕೊರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ ಎಂದು ಪ್ರಕಾಶ ಅವರ ದೊಡ್ಡಪ್ಪ ರಾಜು ವಾಘ್ಮೋರೆ ತಿಳಿಸಿದ್ದಾರೆ.
ಅಗ್ನಿ ಶಾಮಕ ದಳ, ಎಸ್ಡಿಆರ್ಎಫ್ ಸಿಬ್ಬಂದಿ ಮತ್ತು ತಹಶೀಲ್ದಾರ್ ಸಂಜು ಕುಮಾರ್ ದಾಸರ್ ಹಾಗೂ ಪಿಎಸ್ಐ ರಾಹುಲ್ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.