ಕಲಬುರಗಿ: ಪುರಾತನ ಭಾಷೆಗಳಲ್ಲೊಂದಾದ ಉರ್ದು, ವಿಶ್ವದ ಶ್ರೀಮಂತ ಸಾಹಿತ್ಯವನ್ನು ಹೊಂದಿದೆ. ಜಗತ್ತಿಗೆ ಅನೇಕ ಉರ್ದು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಮಂಬೈನ ಬರ್ಹಾನಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಸಾದಿಕಾ ನವಾಬ್ ತಿಳಿಸಿದರು.
ನಗರದ ಖಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಉರ್ದು ವಿಭಾಗದ ವತಿಯಿಂದ ಏರ್ಪಡಿಸಿದ್ದ ’ಸಾಹಿತ್ಯ ಸಭೆ‘ ಕಾರ್ಯಕ್ರಮದಲ್ಲಿ ಮಾತನಾಡಿ, ಲೇಖಕನು ರಚನಾತ್ಮಕವಾಗಿ ಬರೆಯುವಾಗ ಪ್ರಾಮಾಣಿಕವಾಗಿದ್ದರೆ ಮಾತ್ರ ಲೇಖನ ಲವಲವಿಕೆಯಿಂದ ಕೂಡಿರುತ್ತದೆ. ಒಳ್ಳೆಯ ಲೇಖಕನಾಗಲು ಆಲಿಸುವುದು ಅವಶ್ಯವಾಗಿದೆ. ವಿಷಯ ವಿಮರ್ಶೆಯೇ ಸಾಹಿತಿಯ ಜೀವಾಳವಾಗಿದೆ ಎಂದು ತಿಳಿಸಿದರು.
ಉರ್ದು ವಿಭಾಗದ ಮುಖ್ಯಸ್ಥ ಡಾ.ಹಮೀದ್ ಅಕ್ಬರ್ ಮಾತನಾಡಿದರು. ಸನಾ ಹಾಗೂ ಸಂಗಡಿಗರು ಇಕ್ಬಾಲರ ಕವಿತೆಗಳನ್ನು ವಾಚಿಸಿದರು. ಉರ್ದು ವಿಭಾಗದ ವಿದ್ಯಾರ್ಥಿನಿ ನಾಜಿಯಾ ಬೇಗಂ ಅತಿಥಿಗಳನ್ನು ಪರಿಚಯಿಸಿದರು. ವಿ.ವಿ.ಯ ಸಮೂಹ ಸಂವಹನ ಮತ್ತು ಮಾಧ್ಯಮ, ಇಂಗ್ಲಿಷ್, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ವಿಭಾಗದ ಶೈಕ್ಷಣಿಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿನಿ ತೆಹಸೀನ್ ಬೇಗಂ ನಿರೂಪಿಸಿದರು. ವಿದ್ಯಾರ್ಥಿನಿ ಹುಮೆರಾ ಬೇಗಂ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.