ADVERTISEMENT

ಪಟ್ಟಿಯಿಂದ 4 ಸಮುದಾಯ ಕೈಬಿಡುವ ಪ್ರಸ್ತಾವಕ್ಕೆ ವಿರೋಧ

101 ಮೆಟ್ಟಿಲ ಏಣಿಯನ್ನು ಕೆಡವದಿರಿ: ಬೆಳಮಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:57 IST
Last Updated 6 ಆಗಸ್ಟ್ 2020, 7:57 IST
ರೇವೂನಾಯಕ ಬೆಳಮಗಿ
ರೇವೂನಾಯಕ ಬೆಳಮಗಿ   

ಕಲಬುರ್ಗಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮು
ದಾಯವನ್ನು ಕೈಬಿಡುವಂತೆ ಮಾಜಿ ಸಚಿವ ಕೆ.ಬಿ.ಶಾಣಪ್ಪ ನೇತೃತ್ವದ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾ
ಸಭೆಯು ಒತ್ತಾಯಿಸಿದ್ದು ಸರಿಯಲ್ಲ. ಪರಿಶಿಷ್ಟರಲ್ಲಿ ಇಂತಹ ಒಡಕಿನ ಧ್ವನಿಗಳ ಸಲ್ಲದು ಎಂದು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1936ರಲ್ಲಿ ಮೈಸೂರು ಒಡೆಯರ ಕಾಲದಲ್ಲಿ 101 ಜಾತಿಗಳನ್ನು ರಾಜ್ಯದಲ್ಲಿ ಪರಿಶಿಷ್ಟರ ಪಟ್ಟಿಗೆ ಸೇರಿಸಲಾಗಿದ್ದು, ಅದರಲ್ಲಿ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳೂ ಸೇರಿವೆ ಎಂದರು.

‘ಆದರೆ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಶಾಣಪ್ಪ, ಭೀಮರಾವ ಟಿ.ವಿ. ಇತರರು ಈ ನಾಲ್ಕು ಸಮುದಾಯಗಳನ್ನು ಸ್ಪೃಶ್ಯ ಜಾತಿಗಳೆಂದು ಹೇಳುತ್ತಾ, ಇವುಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಹೇಳಿದ್ದಾರೆ. ಸ್ಪೃಶ್ಯ, ಅಸ್ಪೃಶ್ಯ ಎಲ್ಲರೂ ಪರಿಶಿಷ್ಟ ಜಾತಿಯಲ್ಲಿ ಒಂದರ ಮೇಲೊಂದು ಇರುವ ಮಣ್ಣಿನ ಮಡಿಕೆಗಳಂತೆ. ಒಂದು ಮಡಿಕೆ ಒಡೆದರೆ ಎಲ್ಲವೂ ಒಡೆದು ಮೀಸಲಾತಿ ಸಿಗದೇ ಎಲ್ಲ 101 ಜಾತಿಗಳು ಸೌಲಭ್ಯದಿಂದ ವಂಚಿತವಾಗುತ್ತವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಮತ್ತು ಕೆಲ ರಾಜ್ಯಗಳ ಹೈಕೋರ್ಟ್‌ಗಳು ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿವೆ. ಹಾಗಾಗಿ, ಸರ್ಕಾರ ನೀಡಿದ ಅವಕಾಶವನ್ನು ವಿವಾದಕ್ಕೆ ಆಸ್ಪದ ಕೊಡದಂತೆ ಬಳಸಿಕೊಳ್ಳುವುದನ್ನು ಕಲಿಯಬೇಕು’ ಎಂದರು.

ADVERTISEMENT

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿಠ್ಠಲ ರಾಠೋಡ ಮಾತನಾಡಿ, ಬಂಜಾರ ಸಮುದಾಯವು ಹಿಮಾಚಲ ಪ್ರದೇಶ, ದೆಹಲಿ, ಬಿಹಾರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಕರ್ನಾಟಕ, ರಾಜಸ್ಥಾನದಲ್ಲಿ ಪರಿಶಿಷ್ಟ ಪಂಗಡದಲ್ಲಿ ಬರುತ್ತಾರೆ. ಕರ್ನಾಟಕದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಜನಾಂಗದವರನ್ನು ಅವರುಗಳ ಅಂದಿನ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಆಧಾರದ ಮೇಲೆ ಅತ್ಯಂತ ಶೋಷಿತ ಜನಾಂಗವೆಂದು ಅಂದಿನ ಮೈಸೂರು ಅರಸರ ಕಾಲದಿಂದಲೂ ಪ್ರಸ್ತುತ ಸ್ವಾತಂತ್ರ್ಯ ನಂತರದ ಭಾರತ ಸರ್ಕಾರದಲ್ಲಿಯೂ ಸಂವಿಧಾನದತ್ತವಾಗಿ ಪರಿಶಿಷ್ಟ ಜಾತಿಯಲ್ಲಿಯೇ ಇರುವುದನ್ನು ಅಸ್ಪೃಶ್ಯ ಮಹಾಸಭಾ ತಿಳಿದುಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಯಿಂದ ಯಾವುದೇ ಜಾತಿಯನ್ನು ಕೈಬಿಡುವುದಿಲ್ಲವೆಂದು ಮತ್ತು ಪರಿಶಿಷ್ಟ ಜಾತಿಯಲ್ಲಿ ಇರುವ ಯಾವುದೇ ಸಮುದಾಯಗಳನ್ನು ತೆಗೆಯುವುದಿಲ್ಲವೆಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೂ, ಅಸ್ಪೃಶ್ಯ ಮಹಾಸಭಾದವರು ಒಡಕಿನ ಧ್ವನಿಯನ್ನು ಹೊರಡಿಸುತ್ತಿರುವುದು ಖೇದಕರ ಎಂದರು.

ಎಐಬಿಎಸ್‌ಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಜಾಧವ, ಕಲ್ಯಾಣ ಕರ್ನಾಟಕ ಬಂಜಾರ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಬಿ. ನಾಯಕ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಶೀಲಾಬಾಯಿ, ಪ್ರೇಮಕುಮಾರ ರಾಠೋಡ, ಧೇನುಸಿಂಗ್ ಚವ್ಹಾಣ, ಪೋಮಾ ನಾಯಕ ರಾಠೋಡ, ಕೆ.ಟಿ. ರಾಠೋಡ, ಬಲದೇವಸಿಂಗ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.