ಕಾಳಗಿ: ತಾಲ್ಲೂಕಿನ ಸುಗೂರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ (ಡಿ.23) ಜರುಗಲಿರುವ ವೈಕುಂಠ ಏಕಾದಶಿ ಮಹಾಪರ್ವ ಹಾಗೂ ಉತ್ತರದ್ವಾರ ದರ್ಶನಕ್ಕೆ 35 ಕ್ವಿಂಟಲ್ ಹೂಹಾರಗಳಿಂದ ಅಲಂಕಾರ ಮಾಡಲಾಗುತ್ತಿದೆ ಎಂದು ಪ್ರಧಾನ ಅರ್ಚಕ ಸನತದಾಸ ಮಹಾರಾಜ ತಿಳಿಸಿದ್ದಾರೆ.
ಶುಕ್ರವಾರ ದೇವಸ್ಥಾನದ ಅಂಗಳದಲ್ಲಿ ಬಗೆಬಗೆಯ ಹೂವುಗಳು ತಂದು ರಾಶಿ ಹಾಕಲಾಗಿದ್ದು ಮಹಿಳಾ ಭಕ್ತರು ಹಾರ ಪೋಣಿಸುವಲ್ಲಿ ನಿರತರಾಗಿದ್ದಾರೆ. ಏಕಾದಶಿ ಶನಿವಾರ, ದ್ವಾದಶಿ ಭಾನುವಾರ (ಡಿ.24) ಅಪಾರ ಸಂಖ್ಯೆಯಲ್ಲಿ ಭಕ್ತರು ವಿಶೇಷ ವೈಕುಂಠ ದ್ವಾರ ದರ್ಶನಕ್ಕೆ ಆಗಮಿಸುತ್ತಾರೆ. ಅವರಿಗೆ ಪ್ರಸಾದವಾಗಿ 25 ಸಾವಿರ ಬೂಂದಿ ಉಂಡಿಗಳನ್ನು ವಿತರಿಸಲಾಗುತ್ತಿದೆ. ವಿಸ್ಮಯ ಭತ್ತ ಒಳಗೊಂಡಂತೆ 30 ಕ್ವಿಂಟಲ್ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿನ ಅನಂತಪದ್ಮನಾಭ (ವಿಷ್ಣುತೀರ್ಥ ಪುಷ್ಕರಣಿ) ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಇಂದು (ಡಿ.23) ಅಭಿಷೇಕ, ಪೂಜಾದಿಗಳು ಜರುಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.