ಕಲಬುರ್ಗಿ: ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದುದಕ್ಕೆ ಚಿಕಿತ್ಸೆ ಪಡೆಯಲು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಫಜಲಪುರದ ಗ್ರಾಮ ಲೆಕ್ಕಾಧಿಕಾರಿ ಅಣವೀರ ನಂದೂರ (45) ಎಂಬುವವರು ಬುಧವಾರ ಸಂಜೆ ಸಾವಿಗೀಡಾಗಿದ್ದಾರೆ.
ಇದಕ್ಕೆ ವೈದ್ಯರು ನೀಡಿದ ಹೈಡೋಸ್ ಇಂಜೆಕ್ಷನ್ ಕಾರಣ ಎಂದು ಆರೋಪಿಸಿರುವ ಕುಟುಂಬ ಸದಸ್ಯರು ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಾರ್ಡ್ ಬಳಿ ಪ್ರತಿಭಟನೆ ನಡೆಸಿದರು.
ಘಟನೆ ವಿವರ: ನವೆಂಬರ್ 18ರಂದು ರಾತ್ರಿ ಅಣವೀರ ಅವರನ್ನುಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಿನಿಂದಲೂ ವೈದ್ಯರು ಸರಿಯಾದ ತಪಾಸಣೆ ನಡೆಸದೇ ಕಾಲಹರಣ ಮಾಡಿದರು. ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸುವಿದಾಗಿ ಭರವಸೆ ನೀಡಿದ್ದರೂ ಸ್ಥಳಾಂತರ ಮಾಡಿರಲಿಲ್ಲ. ರಕ್ತದ ಗುಂಪು ಒಂದು ಬಾರಿ ಬಿ ಪಾಸಿಟಿವ್ ಎಂದು ಹೇಳಿದರೆ ಮತ್ತೊಂದು ಬಾರಿ ಬೇರೆ ರಕ್ತದ ಮಾದರಿ ಇದೆ ಎಂದು ನಮ್ಮನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದರು. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ವೈದ್ಯರು ಹೈಡೋಸ್ ಇಂಜೆಕ್ಷನ್ ನೀಡಿದರು. ಅದಾದ ಕೆಲ ಹೊತ್ತಿನಲ್ಲಿಯೇ ಅಣವೀರ ಅವರು ಕೊನೆಯುಸಿರೆಳೆದರು ಎಂದುಅವರ ಪತ್ನಿ ಭಾಗ್ಯಜ್ಯೋತಿ ಗೋಳಿಟ್ಟರು.
ವಾರ್ಡ್ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಡ್ಯೂಟಿ ಡಾಕ್ಟರ್ಗಳು ಇರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.