ಕಲಬುರ್ಗಿ: ಮನುಷ್ಯ ಎಷ್ಟೇ ಬೆಳೆದು ಬಲಗೊಂಡರೂ ನಮ್ಮ ಧರ್ಮ ಸಂಸ್ಕೃತಿ ಮರೆಯಬಾರದು. ಮಾನವ ಬದುಕಿನ ಶ್ರೇಯಸ್ಸಿಗಾಗಿ ಸದ್ಗುರು ವಿಶ್ವಾರಾಧ್ಯರ ಸಂದೇಶ ಸರ್ವಕಾಲಕ್ಕೆ ಅನ್ವಯವಾಗುತ್ತದೆ ಎಂದು ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯರು ನುಡಿದರು.
ಅವರು ಪೇಠ ಫಿರೋಜಾಬಾದ್ ಗ್ರಾಮದ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಆಶೀರ್ವಚನದಲ್ಲಿ ದೇವರು ಕೊಟ್ಟ ಅನ್ನ, ಗಾಳಿ, ನೀರು, ಸೇವಿಸಿದ ನಾವು ಭಗವಂತನ ಸ್ಮರಣೆ ಮಾಡಬೇಕು. ದೇವರು ಕೊಟ್ಟ ಗಾಳಿ, ನೀರು, ಆಹಾರ ಕೆಟ್ಟಿಲ್ಲ. ಆದರೆ ನಮ್ಮ ಮನಸ್ಸು ಕೆಟ್ಟಿವೆ, ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿ ಇಲ್ಲ, ಮೈಯನ್ನು ಮಾತ್ರ ಬೆಳೆಸಿದರೆ ಸಾಲದು, ಬುದ್ಧಿ, ಮನಸ್ಸು ಬೆಳೆಯಬೇಕು. ಸುಖ ದುಃಖ ಯಾರನ್ನೂ ಬಿಟ್ಟಿಲ್ಲ. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಸಮತೋಲನದಲ್ಲಿ ಬದುಕಿ ಬಾಳುವುದೇ ಮನುಷ್ಯನ ಗುರಿ. ಕಷ್ಟಗಳನ್ನು ಎದುರಿಸಲು ಧೈರ್ಯ ಮತ್ತು ಸಹನೆ ಗುಣಗಳು ಅವಶ್ಯಕ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ ಧರ್ಮಸಭೆ ಉದ್ಘಾಟಿಸಿದರು. ಕುಳೇಕುಮಟಗಿ ಗುರುಸ್ವಾಮಿ ಶರಣರು ತಪೋವನ ಶ್ರೀಗಳ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಕಡಿಕೋಳ, ಗಡಿಗೌಡಗಾಂವ, ಪಾಳಾ, ಮಲಖೇಡ, ತೊನಸನಹಳ್ಳಿ, ಸ್ಟೇಶನ್ ಬಬಲಾದ, ವೆಂಕಟಬೇನೂರ ಶ್ರೀಗಳು ಉಪಸ್ಥಿತರಿದ್ದರು.
ಸಾಹಿತಿ ಎಲ್.ಬಿ.ಕೆ. ಅಲ್ದಾಳ, ಅರುಣಕುಮಾರ ಶೀರೂರ, ವಿಜಯವೀರ ದುಧನಿ, ಬಸವಣ್ಣ ಶೀರೂರ, ದಯಾನಂದ ಸ್ವಾಮಿ ನಾಗರಾಳ, ಬಸವರಾಜ ಕಟ್ಟಿ, ಚಂದ್ರಶೇಖರ ಮಾಮನಿ ಇದ್ದರು, ಶಖಾಪೂರ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಭರತನಾಟ್ಯ ಜರುಗಿತು.
ಅಣ್ಣಾರಾವ ಮತ್ತಿಮೂಡ, ರವಿಸ್ವಾಮಿ ಗೋಟೂರ ಅವರಿಂದ ಸಂಗೀತ ಜರುಗಿತು. ಮಹಾಂತಗೌಡ ಪಾಟೀಲ ಸೊನ್ನ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.