ADVERTISEMENT

6 ಸಾವಿರ ಜನರಿಗೆ ಒಂದೇ ಕೊಳವೆಬಾವಿ

ರೇವೂರ(ಬಿ): ಹೆಚ್ಚಿದ ಕುಡಿಯುವ ನೀರಿನ ಬವಣೆ

ಶಿವಾನಂದ ಹಸರಗುಂಡಗಿ
Published 6 ಮೇ 2020, 20:00 IST
Last Updated 6 ಮೇ 2020, 20:00 IST
ಅಫಜಲಪುರ ತಾಲ್ಲೂಕಿನ ರೇವೂರ(ಬಿ) ಗ್ರಾಮದಲ್ಲಿ ಜನ ಬುಧವಾರ ನೀರಿಗಾಗಿ ಮುಗಿಬಿದ್ದಿರುವದು
ಅಫಜಲಪುರ ತಾಲ್ಲೂಕಿನ ರೇವೂರ(ಬಿ) ಗ್ರಾಮದಲ್ಲಿ ಜನ ಬುಧವಾರ ನೀರಿಗಾಗಿ ಮುಗಿಬಿದ್ದಿರುವದು   

ಅಫಜಲಪುರ: ತಾಲ್ಲೂಕಿನ ರೇವೂರ(ಬಿ) ಗ್ರಾಮದಲ್ಲಿ ದಲಿತರ ಓಣಿ, ತಾಂಡಾ ಸೇರಿ ಸುಮಾರು 6 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಒಂದೇ ಒಂದು ಕೊಳವೆಬಾವಿಯಲ್ಲಿ ನೀರು ಬರುತ್ತಿದ್ದು, ಜನರು ನೀರು ಸಾಲದೆ ಪರದಾಡುತ್ತಿದ್ದಾರೆ.

ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ 10 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅವುಗಳಲ್ಲಿ ಒಂದರಲ್ಲಿ ಬಿಟ್ಟು ಉಳಿದವಲ್ಲಿ ಹೇಳಿಕೊಳ್ಳುವಷ್ಟು ನೀರು ಬರುತ್ತಿಲ್ಲ. ‘ಕೊಳವೆಬಾವಿ ಮುಂದೆ ಕಾದು ಕಾದು ಸಾಕಾಗಿ ನೀರಿಗಾಗಿ ತೋಟಗಳಿಗೆ ಅಡ್ಡಾಡುತ್ತಿದ್ದೇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಗ್ರಾಮದಲ್ಲಿರುವ ಒಂದು ತೆರೆದ ಬಾವಿಯಲ್ಲೂ ನೀರು ಬತ್ತಿದೆ. ಕಳೆದ ವರ್ಷ ತಹಶೀಲ್ದಾರರು ರೇವೂರ(ಬಿ)ಗೆ 3 ಮತ್ತು ರೇವೂರ(ಕೆ) ಗ್ರಾಮಕ್ಕೆ 2 ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಿದ್ದರು. ಆದರೆ ಪ್ರಸ್ತುತ ವರ್ಷ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದರು ಪ್ರಯೋಜನ ಆಗಿಲ್ಲ. ಶಾಸಕ ಎಂ.ವೈ.ಪಾಟೀಲ ಹಾಗೂ ಜಿ.ಪಂ ಸದಸ್ಯೆ ರತ್ನವ್ವಾ ಆರ್.ಕಲ್ಲೂರ ಅವರು ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ಮುಖಂಡ ಓಂಕಾರ ಪಾಟೀಲ ಒತ್ತಾಯಿಸಿದರು.

ADVERTISEMENT

ವಿಶೇಷ ಅನುದಾನದಲ್ಲಿ ರೇವೂರ(ಬಿ) ಗ್ರಾಮದ ಚಿಂಚೋಳಿ ಹಳ್ಳದಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ನೀರು ಚೆನ್ನಾಗಿದೆ, ಅಲ್ಲಿಂದ ರೇವೂರ(ಬಿ), ರೇವೂರ(ಕೆ) ಗ್ರಾಮಗಳಿಗೆ ₹ 30 ಲಕ್ಷದಲ್ಲಿ ಪೈಪ್‌ಲೈನ್‌ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ತಹಶೀಲ್ದಾರರೊಂದಿಗೆ ಮಾತನಾಡಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲರು ಪ್ರತಿಕ್ರಿಸಿದರು.

14ನೇ ಹಣಕಾಸು ಯೋಜನೆಯಡಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ ಕುಡಿಯುವ ನೀರಿನ ಕ್ರಿಯಾ ಯೋಜನೆ ಅನುಮೋದನೆಯಾಗಿ ಇನ್ನೂ ಬಂದಿಲ್ಲ. ಬಂದ ನಂತರ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗ್ರಾ.ಪಂ ಅಧ್ಯಕ್ಷ ಮೌಲಾಲಿ ಸಿಂದಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.