ADVERTISEMENT

ಬೈಕ್ ದಾಖಲೆ ಪರಿಶೀಲಿಸುವಾಗ ಮಹಿಳಾ ಎಎಸ್‌ಐ ಮೇಲೆ ಹಲ್ಲೆ: ಜೋಗೂರ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 16:34 IST
Last Updated 1 ಜೂನ್ 2021, 16:34 IST
ಕಲಬುರ್ಗಿಯ ಅಶೋಕ ‌ನಗರ ಠಾಣೆಯ ಎಎಸ್ಐ ಸುಮಂಗಲಾ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿದ ಯುವಕ‌‌ ಮಹೇಶನನ್ನು ಸಾರ್ವಜನಿಕರು ಕಂಬಕ್ಕೆ ‌ಕಟ್ಟಿರುವುದು
ಕಲಬುರ್ಗಿಯ ಅಶೋಕ ‌ನಗರ ಠಾಣೆಯ ಎಎಸ್ಐ ಸುಮಂಗಲಾ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿದ ಯುವಕ‌‌ ಮಹೇಶನನ್ನು ಸಾರ್ವಜನಿಕರು ಕಂಬಕ್ಕೆ ‌ಕಟ್ಟಿರುವುದು   

ಕಲಬುರ್ಗಿ: ನಗರದ ರಾಷ್ಟ್ರಪತಿ ವೃತ್ತದಲ್ಲಿ ಮಂಗಳವಾರ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ತಡೆದು ದಾಖಲೆ ತಪಾಸಣೆ ಮಾಡುತ್ತಿದ್ದ ಮಹಿಳಾ ಎಎಸ್‌ಐ ಸುಮಂಗಲಾ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಾಲ್ಲೂಕಿನ ಜೋಗೂರ ಗ್ರಾಮದ ಮಹೇಶ ಶಿವಶರಣಪ್ಪ ಹೂಗಾರ ಎಂಬಾತನನ್ನು ಬಂಧಿಸಿದ್ದಾರೆ.

ಬೆಳಿಗ್ಗೆ ನಗರದ ಜೇವರ್ಗಿ ರಸ್ತೆಯಲ್ಲಿ ಸುಮಂಗಲಾ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಈ ವೇಳೆ ವೃತ್ತದ ಮೂಲಕ ಹಾದು ಹೋಗುತ್ತಿದ್ದ ಯುವಕ ಮಹೇಶನ ಬೈಕ್ ತಡೆದು ಜಪ್ತಿ ಮಾಡಲು ಮುಂದಾಗಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ದಾಖಲೆ ತೋರಿಸುವಂತೆ ಕೇಳಿದಾಗ ಮಹೇಶ ಗಡಸಾಗಿ ಮಾತನಾಡಿದ್ದಾನೆ. ದಂಡ ವಿಧಿಸಲು ಮುಂದಾದಾಗಲೂ ವಾದ ನಡೆದಿದೆ. ಆಗ ಸಿಟ್ಟಿಗೆದ್ದ ಎಎಸ್‌ಐ ಸುಮಂಗಲಾ ಯುವಕನ ಕಪಾಳಕ್ಕೆ ಹೊಡೆದಿದ್ದಾರೆ. ಯುವಕನೂ ಪ್ರತಿಯಾಗಿ ಸುಮಂಗಲಾ ಅವರಿಗೆ ಹೊಡೆದಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಘಟನೆ ನೋಡುತ್ತಿದ್ದ ದಾರಿಹೋಕರು ಎಎಸ್‌ಐ ನೆರವಿಗೆ ಧಾವಿಸಿ, ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ನಂತರ ಆತನನ್ನು ಅಶೋಕ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಎಸ್‌ಐ ಸುಮಂಗಲಾ ರೆಡ್ಡಿ ಅಶೋಕ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಈ ಕುರಿತು ಮಾಹಿತಿ ನೀಡಿದ ಡಿಪಿಸಿ ಡಿ. ಕಿಶೋರಬಾಬು, ‘ಘಟನೆ ನಡೆದಿರುವುದು ದುರದೃಷ್ಟಕರ. ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.