ADVERTISEMENT

ಸೇಡಂ: ತಾಲ್ಲೂಕಿನಲ್ಲಿ ತೊಗರಿ ಕೇಂದ್ರ ಎಲ್ಲಿವೆ?

ತಾ.ಪಂ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 1:36 IST
Last Updated 29 ಜನವರಿ 2021, 1:36 IST
ಸೇಡಂನಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಿತಾ ಪರಶುರಾಮ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಸೇಡಂನಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಿತಾ ಪರಶುರಾಮ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಸೇಡಂ: ತಾಲ್ಲೂಕಿನಲ್ಲಿ ಎಷ್ಟು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳು ಎಲ್ಲಿವೆ? ಮಾಹಿತಿ ಕೊಡಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಪ್ರಶ್ನಿಸಿದಾಗ ಕೃಷಿ ಅಧಿಕಾರಿ ಪ್ರಕಾಶ ಉತ್ತರವಿಲ್ಲದೆ ಸುಮ್ಮನೆ ನಿಂತ ಘಟನೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಿತಾ ಪರಶುರಾಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಗಡಿಭಾಗದಲ್ಲಿ ಬಿತ್ತನೆಬೀಜಗಳು ದಲ್ಲಾಳಿಗಳಿಂದ ಮಾರಾಟವಾಗುತ್ತಿವೆ. ನಿಜಫಲಾನುಭವಿಗೆ ಸಿಗುತ್ತಿಲ್ಲ. ರೈತರು ತೆಲಂಗಾಣ ಸೇರಿದಂತೆ ಆಂಧ್ರಪ್ರದೇಶಗಳಿಂದ ತರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ದಾಖಲೆಪತ್ರಗಳ ಹೆಸರ ಮೇಲೆ ದಲ್ಲಾಳಿಗಳು ಲಾಭ ಪಡೆಯುತ್ತಿದ್ದಾರೆ’ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಪ್ರಕಾಶ, ‘ಅಂತವರ ವಿರುದ್ಧ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ’ ಎಂದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಕ್ಬುಲ್ ದಫೇದಾರ ಮಾತನಾಡಿ, ‘ತಾಲ್ಲೂಕಿನಲ್ಲಿ ಇಲಾಖೆಯ ಒಟ್ಟು 11 ವಸತಿನಿಲಯಗಳಿದ್ದು, ಕೋವಿಡ್-19 ಸಂದರ್ಭದಲ್ಲಿ ಎಲ್ಲವೂ ಬಂದ್ ಆಗಿದ್ದವು. ಈಗ ಕೋವಿಡ್‌ ಮುನ್ನೆಚ್ಚರಿಕೆಯೊಂದಿಗೆ ಆರಂಭಿಸಲಾಗುತ್ತಿದೆ’ ಎಂದರು.

ಪಶುಸಂಗೋಪನಾ ಇಲಾ ಖೆಯ ಸಹಾಯಕ ನಿರ್ದೇಶಕ ಮಾರುತಿ ನಾಯಕ್ ಮಾತನಾಡಿ, ‘ಜಾನುವಾರುಗಳಿಗೆ ಆವರಿಸಿದ್ದ ಲಂಪಿಸ್ಕಿನ್‌ ಎಂಬ ವಿಚಿತ್ರ ಕಾಯಿಲೆಯನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಅದರ ನಿರ್ಮೂಲನೆಗೆ ಶ್ರಮಿಸಲಾಗಿದೆ. ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಕಾಲುಬಾಯಿ ರೋಗ ನಿರ್ಮೂಲನೆಗೂ ಸಹ ಜನಪ್ರತಿನಿಧಿಗಳು ಸೇರಿದಂತೆ ರೈತರ ಸಹಕಾರ ಅವಶ್ಯವಿದೆ’ ಎಂದು ಮನವಿ ಮಾಡಿದರು.

‘ಅಂಗನವಾಡಿ ಕಟ್ಟಡ ಕಾಮಗಾರಿಗಳು ಕೆಲವು ಕಡೆ ಸ್ಥಗಿತಗೊಂಡಿದ್ದು, ಅಭಿವೃದ್ಧಿ ಕಾರ್ಯಗಳು ನಿಂತಿವೆ. ಇದರ ಕುರಿತು ಇಲ್ಲಿಯವರೆಗೂ ಅಧಿಕಾರಿಗಳು ಕ್ರಮಕ್ಕೆ ಏಕೆ ಮುಂದಾಗಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರೀತಿ ಮೈಲ್ವಾರ ಮತ್ತು ವಿಜಯಕುಮಾರ ಶರ್ಮಾ ಪ್ರಶ್ನಿಸಿದರು. ‘ಸ್ಥಗಿತಗೊಂಡ ಕಟ್ಟಡಗಳ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪತ್ರ ಬರೆಯಲಾಗಿದೆ’ ಎಂದು ಸಿಡಿಪಿಒ ಮುರುಗೇಶ ಗುಣಾರಿ ತಿಳಿಸಿದರು.

‘ಮಳೆಗಾಲದಲ್ಲಿ ಅತಿವೃಷ್ಟಿ ಯಿಂದಾಗಿ ನದಿ ನೀರು ಬ್ರಿಡ್ಜ್‌ಗಳ ಮೇಲೆ ಹರಿದು ಸೇತುವೆ ಮೇಲಿನ ಪೈಪ್ ಹಾಳಾಗಿವೆ. ಕೆಲವೆಡೆ ಶಿಥಿಲಗೊಂಡಿವೆ. ಅವುಗಳ ದುರಸ್ತಿಗೆ ಮುಂದಾಗಬೇಕು’ ಎಂದು ಸದಸ್ಯರಾದ ಚೆನ್ನಬಸ್ಸಪ್ಪ ಹಾಗರಗಿ ಮತ್ತು ವೆಂಕಟರಾಮರೆಡ್ಡಿ ಹೈಯ್ಯಾಳ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಹೇಮ್ಲಾನಾಯಕ, ಇಒ ಗುರುನಾಥ ಶೆಟಗಾರ, ಸದಸ್ಯರಾದ ಸುರೇಖಾ ರಾಜಶೇಖರ ಪುರಾಣಿಕ್, ಸಿದ್ದಮ್ಮ ಶಾಮಪ್ಪ ಆಡಕಿ, ಪದ್ಮಮ್ಮ ರವೀಂದ್ರ ಇಟಕಾಲ್, ಚೆನ್ನಬಸ್ಸಪ್ಪ ಹಾಗ ರಗಿ, ವೆಂಕಟರಾಮರೆಡ್ಡಿ ಹೈಯ್ಯಾಳ, ವೆಂಕಟರಾವ ಮಿಸ್ಕಿನ್, ರಾಮು ನಾಯಕ, ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.