ಕಲಬುರ್ಗಿ: ‘ನಿಮ್ಮ ಪಕ್ಷದ ಒಳಗಿನ ನಿಮ್ಮ ವಿರೋಧಿ ಗುಂಪು ಎಪಿಎಂಸಿ ಹೊಸ ಕಾಯ್ದೆ ಜಾರಿಯ ಸುಗ್ರೀವಾಜ್ಞೆಯಂತಹ ಎಡವಟ್ಟುಗಳನ್ನು ಮಾಡಿಸಿ ನಿಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ನೀವು ಬಲಿಯಾಗಬಾರದು. ತಕ್ಷಣ ಸುಗ್ರಿವಾಜ್ಞೆ ವಾಪಸ್ ಪಡೆಯಬೇಕು’ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
‘ಹೊಸ ಕಾಯ್ದೆ ಜಾರಿ ವಿರೋಧಿಸಿ ಎಪಿಎಂಸಿ ವರ್ತಕರು ಐದು ದಿನಗಳಿಂದ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸುತ್ತಿದ್ದಾರೆ. ಈ ತಿದ್ದುಪಡಿಯ ಮಾದರಿ ಕರಡನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಕಳಿಸಿದೆ. ಅನೇಕ ರಾಜ್ಯಗಳು ಇದನ್ನು ಜಾರಿಗೊಳಿಸಿಲ್ಲ. ಕರ್ನಾಟಕದಲ್ಲಿ ಅವಸರದಿಂದ ಜಾರಿಗೊಳಿಸಿದ್ದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
‘ರೈತ ಹೋರಾಟದ ಹಿನ್ನಲೆಯಿಂದ ಬಂದ ನೀವು, ಅವರ ಧ್ವನಿಯಾಗಿ ನಿಂತ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಿರುವಿರಿ. ರೈತರ ಕಷ್ಟ ನೋವುಗಳನ್ನು ಅರಿತವರಾಗಿದ್ದೀರಿ. ಆದರೆ ಇಂತಹ ಕ್ರೂರವಾದ ತಿದ್ದುಪಡಿ ಸುಗ್ರಿವಾಜ್ಞೆ ಅನುಷ್ಠಾನ ಮಾಡಿರುವುದು ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ’ ಎಂದು ಬಿ.ಆರ್. ಪಾಟೀಲ ಟೀಕಿಸಿದ್ದಾರೆ.
‘ಕಾಯ್ದೆ ವಾಪಸ್ ಪಡೆದು ಸ್ಥಗಿತಗೊಂಡಿರುವ ಎಪಿಎಂಸಿ ವಹಿವಾಟು ಪನರಾರಂಭಗೊಳ್ಳುವಂತೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.