ADVERTISEMENT

ವಿಶ್ವ ಹೃದಯ ದಿನ; ಉತ್ತಮ ಜೀವನ ಶೈಲಿಯಿಂದ ಹೃದ್ರೋಗ ದೂರ

ಡಾ. ಬಸವಪ್ರಭು ಅಮರಖೇಡ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 14:31 IST
Last Updated 29 ಸೆಪ್ಟೆಂಬರ್ 2022, 14:31 IST
ಕಲಬುರಗಿ ನಗರದ ಯುನೈಟೆಡ್‌ ಆಸ್ಪತ್ರೆಯ ಹೃದಯ ಚಿಕತ್ಸಾ ಘಟಕದಲ್ಲಿನ ನೂತನ ಕ್ಯಾಥ್-ಲ್ಯಾಬ್ ಪರಿಚಯಿಸಿದ ವೈದ್ಯರ ತಂಡ
ಕಲಬುರಗಿ ನಗರದ ಯುನೈಟೆಡ್‌ ಆಸ್ಪತ್ರೆಯ ಹೃದಯ ಚಿಕತ್ಸಾ ಘಟಕದಲ್ಲಿನ ನೂತನ ಕ್ಯಾಥ್-ಲ್ಯಾಬ್ ಪರಿಚಯಿಸಿದ ವೈದ್ಯರ ತಂಡ   

ಕಲಬುರಗಿ: ‘ಜಗತ್ತಿನ ಮೂರನೇ ಒಂದರಷ್ಟು ಸಾವು ಹೃದ್ರೋಗಗಳಿಂದ ಸಂಭವಿಸುತ್ತಿದ್ದು, ಆರೋಗ್ಯಪೂರ್ಣ ಜೀವನಶೈಲಿಯಿಂದಜನರು ಹೃದಯ ಸಂಬಂಧಿತ ರೋಗಗಳನ್ನು ದೂರ ಇಡಬಹುದು’ ಎಂದು ಹೃದಯತಜ್ಞ ಡಾ. ಬಸವಪ್ರಭು ಅಮರಖೇಡ್ ಹೇಳಿದರು.

ನಗರದ ಯುನೈಟೆಡ್ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿತ್ಯ ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿ, ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಿದರೆ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇರುತ್ತದೆ. ಮದ್ಯಪಾನ ಮತ್ತು ಧೂಮಪಾನ ತ್ಯಜಿಸಿ, ಆರೋಗ್ಯಪೂರ್ಣ ಜೀವನಶೈಲಿಯನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಹೃದಯಾಘಾತದ ತುರ್ತುಸ್ಥಿತಿಯಲ್ಲಿ ಪ್ರಾಣ ರಕ್ಷಣೆಯ ಸಿಪಿಆರ್‌ ಕೌಶಲವನ್ನು ಎಲ್ಲಾ ಜನರಿಗೂ ಕಲಿಸಿಕೊಡಬೇಕು. ವೈದ್ಯರಲ್ಲದವರೂ ಹೃದಯಾಘಾತದ ತುರ್ತುಪರಿಸ್ಥಿಯನ್ನು ನಿಭಾಯಿಸಬಲ್ಲರು. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆಈ ತರಬೇತಿ ಕೊಡಬೇಕು’ ಎಂದರು.

ಹೃದಯಶಸ್ತ್ರಜ್ಞ ಡಾ. ಅರುಣ್ ಕುಮಾರ್ ಹರಿದಾಸ್ ಮಾತನಾಡಿ, ‘ಆರೋಗ್ಯದ ನಿಷ್ಕಾಳಜಿ, ಸಕಾಲದಲ್ಲಿ ಸಿಗದ ಚಿಕಿತ್ಸೆ, ಅನಿಯಮಿತ ಆಹಾರ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಹೃದಯ ಕವಾಟಗಳಿಗೆ ಹಾನಿಯಾಗುತ್ತಿದೆ. ಇದನ್ನು ನಿಲರ್ಕ್ಷ್ಯಿಸಿದರೆ40 ವರ್ಷಗಳ ಬಳಿಕ ಸಮಸ್ಯೆ ಬಿಗಡಾಯಿಸಲಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ಕೊಡಿಸಬೇಕು’ ಎಂದು ತಿಳಿಸಿದರು.‌

ಆಸ್ಪತ್ರೆಯಲ್ಲಿ ಹೊಸದಾಗಿ ಅತ್ಯಾಧುನಿಕ ಕ್ಯಾಥ್-ಲ್ಯಾಬ್ (ಹೃದಯ ಚಿಕತ್ಸಾ ಘಟಕ) ಪರಿಚಯಿಸಲಾಗಿದೆ. ಹೃದ್ರೋಗಗಳ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಸೈಕ್ಲಾಥಾನ್ ಮತ್ತು ವಾಕಥಾನ್ ನಡೆಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ, ಆಸ್ಪತ್ರೆಯ ಅಧ್ಯಕ್ಷ ಡಾ. ವಿಕ್ರಮ್ ಸಿದ್ದಾರೆಡ್ಡಿ, ಡಾ. ವೀಣಾ ಸಿದ್ದಾರೆಡ್ಡಿ, ಡಾ. ದಯಾನಂದ ರೆಡ್ಡಿ, ಡಾ. ಶಿವರಾಜ ಹಂಚಿನಾಳ, ಡಾ. ಲಿಯಾಖತ್ ಅಲಿ, ಡಾ. ಅಬ್ದುಲ್ ಹಕೀಂ ಇದ್ದರು.

ಶಿಬಿರದಲ್ಲಿ 500ಕ್ಕೂ ಅಧಿಕ ಜನರಿಗೆ ಹೃದಯ ತಪಾಣೆ ನಡೆಸಲಾಯಿತು. ಇದಕ್ಕೂ ಮುನ್ನ ಯುನೈಟೆಡ್ ಆಸ್ಪತ್ರೆ ವತಿಯಿಂದ ವಾಕಥಾನ್ ಹಾಗೂ ಸೈಕ್ಲೊಥಾನ್ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.