ADVERTISEMENT

ಕಲಬುರ್ಗಿ | ಯೂಟ್ಯೂಬ್‌ನಲ್ಲಿ ಈದ್‌ ಪ್ರಾರ್ಥನೆಗೆ ಮಾರ್ಗದರ್ಶನ

ಎಲ್ಲ ಧರ್ಮೀಯರಿಗಾಗಿ ಪ್ರಾರ್ಥನೆ: ಸಯ್ಯದ್‌ ಶಾ ಖುಸ್ರೊ ಹುಸೇನಿ‌ ಸಂದೇಶ

ಸಂತೋಷ ಈ.ಚಿನಗುಡಿ
Published 23 ಮೇ 2020, 19:30 IST
Last Updated 23 ಮೇ 2020, 19:30 IST
ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ
ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ   

ಕಲಬುರ್ಗಿ: ಈ ಬಾರಿಯ ಈದ್‌ ಉಲ್‌ ಫಿತ್ರ್‌ನ ವಿಶೇಷ ಪ್ರಾರ್ಥನೆಯನ್ನು ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ‘ಯೂಟ್ಯೂಬ್‌’ ಮೂಲಕ ಮಾರ್ಗದರ್ಶನ ನೀಡಲು, ಇಲ್ಲಿನ ಖಾಜಾ ಬಂದಾ ನವಾಜ್‌ ದರ್ಗಾದ ಮುಖ್ಯಸ್ಥರಾದ ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ ಸಾಹೇಬ್‌ ಸಜ್ಜಾದಾ ನಶೀನ್‌ ನಿರ್ಧರಿಸಿದ್ದಾರೆ.

ಮುಸ್ಲಿಮರು ತಿಂಗಳ ಉಪವಾಸ ಮುಗಿಸಲು ಇನ್ನೆರಡು ದಿನ ಮಾತ್ರ ಬಾಕಿ ಇದೆ. ಭಾಗಶಃ ಸೋಮವಾರ (ಮೇ 25) ಈದ್‌ ಉಲ್‌ ಫಿತ್ರ್‌ ಆಚರಿಸಲಾಗುತ್ತಿದೆ. ಪ್ರತಿ ಬಾರಿ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಸೇರಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ಲಾಕ್‌ಡೌನ್‌ ಹಾಗೂ ನಿಷೇಧಾಜ್ಞೆ ಜಾರಿ ಇರುವ ಕಾರಣ, ಈದ್ಗಾ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಮಾತ್ರವಲ್ಲ; ಮಸೀದಿ, ದರ್ಗಾಗಳಲ್ಲೂ ಗುಂಪುಗೂಡುವುದುನಿರ್ಬಂಧಗೊಳಿಸಲಾಗಿದೆ.

ಈದ್‌ ಸಂದರ್ಭದಲ್ಲಿ ಸಲ್ಲಿಸುವ ವಿಶೇಷ ಪ್ರಾರ್ಥನೆ ಬಗ್ಗೆ ಸಾಮಾನ್ಯ ಮುಸ್ಲಿಮರಿಗೆ ಮಾರ್ಗದರ್ಶನ ಅವಶ್ಯ. ಪ್ರತಿ ವರ್ಷ ಮೈದಾನದಲ್ಲೇ ಧರ್ಮಗುರುಗಳು ಬೋಧಿಸಿದ ಹಾಗೆ ಪ್ರಾರ್ಥನೆ ಸಲ್ಲಿಸಲಾಗುತಿತ್ತು. ಈ ಬಾರಿ ಅದು ಸಾಧ್ಯವಿಲ್ಲದ ಕಾರಣ, ಯು ಟೂಬ್‌ ಮೊರೆಹೋಗಲು ದರ್ಗಾದ ಮುಖಂಡರು ನಿರ್ಧರಿಸಿದ್ದಾರೆ.

ADVERTISEMENT

ಶನಿವಾರ (ಮೇ 23) ಸಂಜೆ ದರ್ಗಾದಲ್ಲಿ ಐವರು ಕೂತುಕೊಂಡು ಪ್ರಾರ್ಥನೆಯ ಪ್ರಾತ್ಯಕ್ಷಿಕೆ ನೀಡುತ್ತಾರೆ. ಇದು ಖಾಜಾ ಬಂದಾ ನವಾಜ್‌ ದರ್ಗಾದ ಯು ಟೂಬ್‌ ಚಾನೆಲ್‌ನಲ್ಲಿ ಸಿಗುತ್ತದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ ಅವರು, ‘ಕೊರೊನಾ ವೈರಾಣುವಿನಿಂದ ದೂರ ಉಳಿಯಲು ಈ ಬಾರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಬೇಡ. ಸುರಕ್ಷತೆ ಎಲ್ಲರಿಗೂ ಅಗತ್ಯ. ನಮ್ಮ ದೈಹಿಕ ಆರೋಗ್ಯ ಸುಧಾರಿಸಿ ಮತ್ತು ಮನಸ್ಸು ಏಕಚಿತ್ತದಿಂದ ದೇವರಲ್ಲಿ ವಿಲೀನಗೊಳ್ಳಲಿ ಎಂಬ ಉದ್ದೇಶದಿಂದ ರಂಜಾನ್‌ ಮಾಸದಲ್ಲಿ ಉಪವಾಸ ಮಾಡುವ ರೂಢಿ ಇದೆ’ ಎಂದರು.

‘ಸಾಮೂಹಿಕ ಪ್ರಾರ್ಥನೆಯ ಬದಲು ನಾವು ಆರೋಗ್ಯಕ್ಕೆ, ಕಾನೂನು ಪರಿಪಾಲನೆಗೆ ಗಮನ ಕೊಡೋಣ. ಯಾರಿಗೆ ಎಲ್ಲಿ ಪ್ರಾರ್ಥನೆ ಮಾಡಲು ಸಾಧ್ಯವೋ ಅಲ್ಲಿಂದಲೇ ಸಲ್ಲಿಸಬಹುದು. ಇದರ ವಿಧಾನ– ನಿಯಮಗಳನ್ನು ಯು ಟೂಬ್‌ ಮೂಲಕ, ವಿವಿಧ ಚಾನಲ್‌ಗಳ ಮೂಲಕವೂ ಪ್ರಸಾರ ಮಾಡುತ್ತೇವೆ’ ಎಂದರು.

‘ಹಿಂದೂ, ಮುಸ್ಲಿಂ, ಕ್ರೌಸ್ತ, ಬೌದ್ಧ, ಸಿಖ್‌ ಜನರಿಗೆ ನಾನು ಹಬ್ಬದ ಶುಭಾಶಯ ಹೇಳುತ್ತೇನೆ. ಎಲ್ಲರ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ನೀವೂ ಮನೆಯಲ್ಲೇ ಪ್ರಾರ್ಥನೆ ಮಾಡಿ. ಕೊರೊನಾ ವೈರಸ್‌ನಿಂದ ಮನುಷ್ಯ ಕುಲವೇ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಈ ಶತ್ರುವಿನ ವಿರುದ್ಧ ಹೋರಾಡಬೇಕಿದೆ’ ಎಂದು ತಿಳಿಸಿದರು.

‘ಸೋಂಕು ಯಾವುದೇ ಧರ್ಮ ನೋಡಿಕೊಂಡು ಬಂದಿದ್ದಲ್ಲ. ಅದು ಮನುಷ್ಯರಿಗೆ ಅಂಟಿಕೊಂಡಿದೆ. ಧರ್ಮಭೇದವಿಲ್ಲದೇ ಒಬ್ಬರಿಗೊಬ್ಬರು ಸಹಕರಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಒಬ್ಬರಿಂದ ಒಬ್ಬರು ದೂರ ಇದ್ದುಕೊಂಡೇ ಹೋರಾಟ ನಡೆಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ. ಹಿಂದೆಂದಿಗಿಂತ ಈಗ ನಮ್ಮ ಸಾಮರಸ್ಯ ಹೆಚ್ಚು ಅಗತ್ಯವಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.