ADVERTISEMENT

ಪ್ರವಾಹ ತಂದಿಟ್ಟ ಸಂಕಷ್ಟ: ಗುಳೇ ಹೊರಟರು

ಅಖಂಡೇಶ್ವರ ಎಂ.ಪತ್ತಾರ
Published 4 ನವೆಂಬರ್ 2019, 19:45 IST
Last Updated 4 ನವೆಂಬರ್ 2019, 19:45 IST
ಉಡುಪಿ-ಮಂಗಳೂರಿಗೆ ಗುಳೇ ಹೊರಟು ನಿಂತಿರುವ ಗುಳೇದಗುಡ್ಡ ತಾಲ್ಲೂಕಿನ ನಾಗರಾಳ, ಹುಲ್ಲಿಕೇರಿ, ಕೆರೆಖಾನಾಪೂರ ಗ್ರಾಮಸ್ಥರು.
ಉಡುಪಿ-ಮಂಗಳೂರಿಗೆ ಗುಳೇ ಹೊರಟು ನಿಂತಿರುವ ಗುಳೇದಗುಡ್ಡ ತಾಲ್ಲೂಕಿನ ನಾಗರಾಳ, ಹುಲ್ಲಿಕೇರಿ, ಕೆರೆಖಾನಾಪೂರ ಗ್ರಾಮಸ್ಥರು.   

ಗುಳೇದಗುಡ್ಡ: ಆಗಸ್ಟ್ ನಂತರ ಎರಡು ಬಾರಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿರುವ ತಾಲ್ಲೂಕಿನ ವಿವಿಧ ಹಳ್ಳಿಗಳ ಜನರು, ಸಂಕಷ್ಟದ ಬದುಕಿನಿಂದ ಬೇಸತ್ತು ಉದ್ಯೋಗ ಅರಸಿ ಉಡುಪಿ, ಮಂಗಳೂರಿನತ್ತ ಗುಳೇ ಹೊರಟಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ 4-5 ವರ್ಷಗಳಿಂದ ಕೆರೆ-ಹಳ್ಳ ತುಂಬುವಂತ ಮಳೆಯಾಗಿರಲಿಲ್ಲ. ಸತತ ಬರಗಾಲದಿಂದ ಹಳ್ಳಿಗಳ ಜನರು ಕಂಗೆಟ್ಟಿದ್ದರು. ಈಗ ಮಲಪ್ರಭಾ ನದಿಯಲ್ಲಿ ಎರಡು ಬಾರಿ ಭೀಕರ ಪ್ರವಾಹ ಬಂದಿದ್ದು, ಅದರಿಂದ ಜಮೀನು, ಮನೆಗಳ ಕಳೆದುಕೊಂಡವರು ಅಕ್ಷರಶ: ರಸ್ತೆಯಲ್ಲಿ ಬದುಕು ಸಾಗಿಸುವಂತಾಯಿತು.

ಪ್ರವಾಹದಿಂದ ಹಾನಿಗೊಳಗಾದವರಿಗೆ ಪರಿಹಾರ ಕೊಡುತ್ತೇವೆಂದು ಸರ್ಕಾರ ಎರಡು ತಿಂಗಳಿಂದ ಹೇಳುತ್ತಾ ಬಂದಿದೆ. ಆದರೆ ₹10 ಸಾವಿರ ಬಿಟ್ಟಿರೆ ನಯಾ ಪೈಸೆ ಪರಿಹಾರ ಬಂದಿಲ್ಲ. ದುಡಿಯುವ ಕೈ ಗಳಿಗೆ ಉದ್ಯೋಗ ಕೊಡಲಿಲ್ಲ. ಮನೆಗಳಿಗೆ ನೀರು ಹೊಕ್ಕು ಜೀವನ ನಡೆಸಲು ಆಗದಂತೆ ಅವು ಹಾಳಾಗಿವೆ. ಜಮೀನಿನಲ್ಲಿ ಬೆಳೆದು ನಿಂತಿದ್ದ ಫಸಲು ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ. ‘ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಕೇಳುವ ಸೌಜನ್ಯ ಕೂಡಾ ತೋರಿಲ್ಲ. ಗ ಜೀವನ ನಡೆಸುವುದು ಕಷ್ಟಾಗಿ ಉಡುಪಿ. ಮಂಗಳೂರಿಗೆ ಕೆಲಸ ಹುಡುಕಿಕೊಂಡು ಹೊರಟಿದ್ದೇವೆ‘ ಎಂದು ನಾಗರಾಳದ ಲಕ್ಷ್ಮವ್ವ ಗೌಡರ ಅಳಲು ತೊಡಿಕೊಂಡರು.

ADVERTISEMENT

ಮಲಪ್ರಭಾ ನದಿ ದಡದ ಚಿಮ್ಮಲಗಿ, ಮಂಗಳಗುಡ್ಡದ ಎಂಟು ಜನರು, ನಾಗರಾಳ, ಲಾಯದಗುಂದಿಯ ಐವರು, ಸಬ್ಬಲಹುಣಸಿ. ಆಸಂಗಿ-ಕಟಗಿನಹಳ್ಳಿ. ಹಳದೂರ, ಇಂಜಿನವಾರಿಯ 10 ಜನ. ಪಾದನಕಟ್ಟಿ ನಾಲ್ವರು. ಹುಲ್ಲಿಕೇರಿ-ಕೆರೆಖಾನಾಪುರದ 10 ಮಂದಿ ಉದ್ಯೋಗವಿಲ್ಲದೇ ಮನೆಗೆ ಕೀಲಿ ಹಾಕಿಕೊಂಡು ಹೊರಟಿದ್ದೇವೆ ಎಂದು ಯಲ್ಲಪ್ಪ ಹುಲ್ಲೂರ ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.