ಹಾಸನ: ‘ಖಾವಿ ತೊಟ್ಟಿರುವ ನಾನು ಅಗತ್ಯಬಿದ್ದರೆ ಕರೆ ನೀಡುವುದಷ್ಟೇ ಅಲ್ಲ, ಆತ್ಮ ರಕ್ಷಣೆಗಾಗಿ ತಲೆ ತೆಗೆಯಲೂ ಸಿದ್ಧ’ ಎಂದು ಅರಸೀಕೆರೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ
ಪ್ರತಿಪಾದಿಸಿದರು.
‘ಶಿವಮೊಗ್ಗದ ಹರ್ಷ ಕೊಲೆ ನಂತರ ಒಂದು ತಲೆಗೆ 10 ತಲೆ ತೆಗೆಯಬೇಕು ಎಂದು ಹೇಳಿಕೆ ನೀಡಿರುವುದರಲ್ಲಿ ಏನು ತಪ್ಪಿದೆ? ಹರ್ಷ ನಮ್ಮ ಮನೆಯ ಮಗ. ಆತನ ಸಾವು ಇನ್ನೂ ಕಾಡುತ್ತಿದೆ. ನಾನು ನೀಡಿದ ಹೇಳಿಕೆ ಹೇಗೆ ಪ್ರಚೋದನ ಕಾರಿಯಾಗುತ್ತದೆ?’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
‘ಕಾವಿ ಧರಿಸಿದ ಮಾತ್ರಕ್ಕೆ ಸುಮ್ಮನಿರಬೇಕು ಎಂದೇನು ಇಲ್ಲ. ಹಿಂದೆ ಪರಶುರಾಮ, ವಶಿಷ್ಠರಂತಹ ಮುನಿಗಳು ಇದ್ದರು. ಧರ್ಮಕ್ಕೆ ಅಪಾಯ ಬಂದಾಗ ಸುಮ್ಮನೆ ನೋಡಿಕೊಂಡು ಇರಲು ಆಗುವುದಿಲ್ಲ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜಿ ಹಳ್ಳಿಯಲ್ಲಿಯೂ ಕಾಶ್ಮೀರದಂತಹ ವಾತಾವರಣ ಇದೆ. ಅಲ್ಲಿ ಕಾನೂನು ಸುವ್ಯವಸ್ಥೆ ಜಾರಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ’ ಎಂದರು.
‘ದಿ ಕಾಶ್ಮೀರ್ ಫೈಲ್ ಸಿನಿಮಾ ವನ್ನುಹಾಸನ ಸೇರಿದಂತೆ ರಾಜ್ಯದಾದ್ಯಂತ ಪ್ರದರ್ಶಿಸಲು ಸಿನಿಮಾ ವಿತರಕರು ಕ್ರಮ ವಹಿಸಬೇಕು. 35 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಹಾಗೂ ಅಲ್ಲಿನ ಹಿಂದೂಗಳು ಎಷ್ಟು ನೋವು ಅನುಭವಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿಯಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಂಚಿಕೆದಾರರು ಕೈಜೋಡಿಸಬೇಕು. ಸಿನಿಮಾ ಪ್ರಾದೇಶಿಕ ಭಾಷೆಗಳಿಗೆ ಡಬ್ಬಿಂಗ್ ಅಗಬೇಕು’ ಎಂದು ಋಷಿಕುಮಾರ ಸ್ವಾಮೀಜಿ ಕೋರಿದರು.
‘ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲೂ ನಮ್ಮ ಶಾಖಾ ಮಠ ಆರಂಭಿಸುವ ಚಿಂತನೆ ಇದೆ. ಅಲ್ಲಿ ಮಠದ ಚಟುವಟಿಕೆ ವಿಸ್ತರಣೆ ಮಾಡುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.