ಮಡಿಕೇರಿ: ಹೈಕೋರ್ಟ್ನ ತೀರ್ಪಿನ ವಿರುದ್ಧವಾಗಿ ವೀರಾಜಪೇಟೆಯ ಗುಹ್ಯ ಅಗಸ್ತ್ಯೇಶ್ವರ ದೇವಸ್ಥಾನದ ಸುತ್ತಮುತ್ತ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಕಾವೇರಿ ಸೇನೆಯ ಸಂಚಾಲಕ ರವಿಚೆಂಗಪ್ಪ, ಈ ಘಟನೆಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಿಂದ ಸುಮಾರು 1 ಕಿ.ಮೀ ಸುತ್ತಳತೆಯಲ್ಲಿ ಮರಳು ಗಣಿಗಾರಿಕೆ ಮಾಡಬಾರದು ಎಂದು ಹೈಕೋರ್ಟ್ 2009ರ ಮಾರ್ಚ್ನಲ್ಲಿ ತೀರ್ಪು ನೀಡಿದೆ. ಆದಾಗ್ಯೂ, ಈಗಲೂ ಅಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ಅಕ್ರಮ ಮರಳು ಗಣಿಗಾರಿಕೆ ಘಟಕಗಳ ಮೇಲೆ ದಾಳಿ ಮಾಡಿರುವ ಉಪವಿಭಾಗಾಧಿಕಾರಿಗಳು ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನೂ ತಡೆಯಲಿ ಎಂದು ಅವರು ಒತ್ತಾಯಿಸಿದರು.
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವಲ್ಲದೇ, ಕೂಟಿಯಾಲ ಸೇತುವೆ ಬಳಿ ಹಾಗೂ ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ಒಂದು ವಾರದೊಳಗೆ ತಡೆಯದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಘೇರಾವ್ ಹಾಕಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.