ನಾಪೋಕ್ಲು: ಮರಳು ದಂಧೆ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರಾಂತಂಕರವಾಗಿ ನಡೆಯುತ್ತಿದೆ ಎಂದು ಕೊಟ್ಟಮುಡಿ ಹಾಗೂ ಚೆರಿಯಪರಂಬು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ನಡೆದಿದೆ.
`ಕೊಟ್ಟಮುಡಿಯ ಬಳಿ ಕಾವೇರಿ ನದಿ ತೀರವು ಸಮತಟ್ಟಾಗಿದ್ದು ಬೇಸಿಗೆಯಲ್ಲಿ ಕೊಟ್ಟಮುಡಿ ಮತ್ತು ನಾಪೋಕ್ಲು ನಡುವಿನ ಕಾಲ್ನಡಿಗೆಯ ದಾರಿಯಾಗಿದೆ. ಈಚೆಗೆ ಕೆಲವು ಮರಳು ಮಾಫಿಯಾದ ಮಂದಿ ಯಂತ್ರದ ಮೂಲಕ ನದಿಯೊಳಗಿನಿಂದ 40-50 ಲಾರಿ ಲೋಡುಗಳಷ್ಟು ಮರಳು ತೆಗೆದಿರುವುದರಿಂದ ಕಾವೇರಿ ನದಿಯು ಅಂದಾಜು 20-25 ಅಡಿ ಆಳದ ಗುಂಡಿಯಾಗಿದೆ. ನದಿ ದಾಟಲು ಸಾಧ್ಯವಿಲ್ಲದಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾ.ಪಂ ಸ್ಥಳೀಯ ಪೋಲೀಸ್ ಠಾಣೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲಾ ಉಪವಿಭಾಗಾಧಿಕಾರಿ ಮತ್ತು ತಾಲೂಕು ತಹಶೀಲ್ದಾರವರಿಗೆ ದೂರು ಸಲ್ಲಿಸಲಾಗಿದೆ. ಹೀಗಿದ್ದೂ ಮರಳುಗಾರಿಕೆ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಅಕ್ರಮ ಮರಳುಗಾರಿಕೆ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಗ್ರಾ,ಪಂ ಅಧ್ಯಕ್ಷ ಸಲೀಂ ಹ್ಯಾರೀಸ್ ಸರ್ಕಾರದ ಕಾನೂನಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶವಿಲ್ಲ. ದಂಧೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು. ಗ್ರಾ.ಪಂ ಸದಸ್ಯರಾದ ಅಪ್ಪನೆರವಂಡ ಕಿರಣ್,ಟಿ.ಎ.ಹನೀಫ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.