ADVERTISEMENT

ಆಕಾಶವಾಣಿ ಹಬ್ಬಕ್ಕೆ ಸ್ವಸ್ಥ ಮಕ್ಕಳ ರಂಗು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:20 IST
Last Updated 13 ಫೆಬ್ರುವರಿ 2012, 8:20 IST

ಮಡಿಕೇರಿ: ಪ್ರಸಾರ ಭಾರತಿ ಕೊಡಗು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ `ಆಕಾಶವಾಣಿ ಹಬ್ಬ~ಕ್ಕೆ ಇಲ್ಲಿಗೆ ಸಮೀಪದ ಸುಂಟಿಕೊಪ್ಪದ ಬಳಿ ಇರುವ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ `ಸ್ವಸ್ಥ~ದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

`ಸ್ವಸ್ಥ~ ಮಕ್ಕಳು ಸೇರಿದಂತೆ ಹಲವು ತಂಡಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮವು `ಆಕಾಶವಾಣಿ ಹಬ್ಬ~ಕ್ಕೆ ಮೆರುಗು ನೀಡಿದವು. `ಸ್ವಸ್ಥ~ ಮಕ್ಕಳು ಮಾಡಿದ `ನಾಣಿಭಟ್ಟನ ಸ್ವರ್ಗದ ಕನಸುಗಳು~ ಎಂಬ ನಾಟಕ ನೋಡುಗರನ್ನು ವಿಶೇಷವಾಗಿ ಸೆಳೆಯಿತು. 

ಮಡಿಕೇರಿಯ ಪುದಿಯನೆರವನ ರೇವತಿ ರಮೇಶ್ ಹಾಗೂ ತಂಡದವರು ಮಾಡಿದ `ಒನಕೆ ಓಬವ್ವ~ನ ನಾಟಕವು ಕನ್ನಡ ನಾಡಿನ ಇತಿಹಾಸವನ್ನು ಮೆಲುಕು ಹಾಕಿತು.

ಮಹಾಪುರುಷ ಗೌತಮ ಬುದ್ಧನ ಜೀವನ ಚರಿತ್ರೆ ಬಿಂಬಿಸುವ ಕಥೆಯನ್ನಾಧರಿಸಿದ `ಮಹಾರಾತ್ರಿ~ ಗೀತ ನಾಟಕವು ನೋಡುಗರನ್ನು ಆಸನದ ಅಂಚಿಗೆ ತಂದುನಿಲ್ಲಿಸಿತ್ತು.

ಶೋಭಾ ಸುಬ್ಬಯ್ಯ ಹಾಗೂ    ಅವರ ತಂಡದ ಪುಟಾಣಿ ಮಕ್ಕಳು ನೆರವೇರಿಸಿದ `ಕಾವೇರಿ~ ನಾಟಕದ ದೃಶ್ಯಗಳು ನೋಡುಗರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು. ಈ ಕಾರ್ಯಕ್ರಮವನ್ನು ಮಡಿಕೇರಿ ಆಕಾಶವಾಣಿ ನೇರ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು.

ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರದ               ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕಿ ಇಂದಿರಾ ಗಜರಾಜ್, ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕ ಎಚ್.ಎಂ.ಎಚ್. ಜಲಾಲುದ್ದೀನ್, `ಸ್ವಸ್ಥ~ ಸಂಸ್ಥೆಯ ಮುಖ್ಯಸ್ಥೆ ಗಂಗಾ ಚೆಂಗಪ್ಪ ಹಾಗೂ ಮುಖ್ಯ ಅತಿಥಿಯಾಗಿ ಟಾಟಾ ಕಾಫಿ ಲಿಮಿಟೆಡ್‌ನ ಹಿರಿಯ                    ಮ್ಯಾನೇಜರ್ ನಾಗೇಶ್ ರಾವ್ ಭಾಗವಹಿಸಿದ್ದರು.

ಮಡಿಕೇರಿ ಆಕಾಶವಾಣಿ              ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಎಂ.ಶಿವಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು.                ಮಾದೇಟಿರ ಬೆಳ್ಯಪ್ಪ                ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.