ADVERTISEMENT

ಆಹ್ವಾನ ನೀಡಿದ್ದು 26 ಮಂದಿಗೆ: ಬಂದವರು ಮೂವರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:50 IST
Last Updated 9 ಅಕ್ಟೋಬರ್ 2012, 8:50 IST

ಮಡಿಕೇರಿ: ಜಿಲ್ಲೆಯಲ್ಲಿ ರೂ 1,000 ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆಯಿಂದ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಚೇಂಬರ್ ಆಫ್ ಕಾಮರ್ಸ್‌ನ ಜಿಲ್ಲಾ ಘಟಕವು ಆಯೋಜಿಸಲು ಮುಂದಾಗಿರುವ ಬಂಡವಾಳ ಹೂಡಿಕೆದಾರರ ಸಮಾ ವೇಶಕ್ಕೆ ಉದ್ಯಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಹೂಡಿಕೆದಾರರ ಸಭೆಯಲ್ಲಿ 26 ಉದ್ಯಮಿಗಳ ಪೈಕಿ ಕೇವಲ 3 ಜನ ಮಾತ್ರ ಭಾಗವಹಿಸಿದ್ದು, ಸಮಾವೇಶದ ಯಶಸ್ಸಿನ ಬಗ್ಗೆ ಪ್ರಶ್ನೆ ಮೂಡು ವಂತಾಗಿದೆ.

ಕಳೆದ ಜೂನ್ 7,8ರಂದು ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 26 ಜನ ಉದ್ಯಮಿಗಳು ಕೊಡಗಿನಲ್ಲಿ ಬಂಡವಾಳ ಹೂಡು ವುದಾಗಿ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು.

ಸುಮಾರು ರೂ 134.49 ಕೋಟಿ ಹೂಡಿಕೆ ಹಾಗೂ 450 ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆ ಇದಾಗಿತ್ತು. ಮುಖ್ಯವಾಗಿ ಪ್ರವಾಸೋದ್ಯಮ, ಫ್ಯಾಬ್ರಿಕೇಷನ್, ಜಲವಿದ್ಯುತ್, ಕಾಫಿ ಸಂಸ್ಕರಣೆ, ಇಟ್ಟಿಗೆ ತಯಾರಿಕೆ ಕ್ಷೇತ್ರದ ಯೋಜನೆಗಳು ಇದಾಗಿದ್ದವು.

ಇದೇ ಜನರಿಗೆ ಮಡಿಕೇರಿಯಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶದ ಬಗ್ಗೆ ಚರ್ಚಿಸಲು ಜಿಲ್ಲಾ ಕೈಗಾರಿಕಾ ಇಲಾಖೆ ವತಿಯಿಂದ ಆಹ್ವಾನ ನೀಡಲಾಗಿತ್ತು. ಆದರೆ, ಸಭೆಗೆ ಹಾಜರಾಗಿದ್ದು ಕೇವಲ 3 ಜನರು ಮಾತ್ರ. ಇವರಲ್ಲಿ ಇಬ್ಬರು ಇದೇ ಜಿಲ್ಲೆಯವರಾಗಿದ್ದು, ಕೇವಲ ಒಬ್ಬರು ಮಾತ್ರ ಬೆಂಗಳೂರಿನಿಂದ ಬಂದವರು. ಜಲ ವಿದ್ಯುತ್ ಕಂಪೆನಿಯಾದ ಬೆಂಗಳೂರಿನ ಕೊಡಗು ಹೈಡಲ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಇಟ್ಟಂಗಿಗಳನ್ನು ತಯಾರು ಮಾಡುವ ಮುರ್ನಾಡಿನ ಎಸ್.ಆರ್. ಅಜ್ಜಪ್ಪ ಸ್ವಾಮಿ ಹಾಗೂ ಕುಶಾಲನಗರದ ಫಿಟ್‌ನೆಸ್ ಜಿಮ್ ಸಂಸ್ಥೆಯವರು ಸಭೆಯಲ್ಲಿ ಪಾಲ್ಗೊಂಡವರು.

ಇವರ ಪೈಕಿ ಇಬ್ಬರ ದಾಖಲೆಗಳು ಸಮರ್ಪ ಕವಾಗಿಲ್ಲ. ಕೇವಲ ಕೊಡಗು ಹೈಡಲ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮಾತ್ರ ಎಲ್ಲ ರೀತಿ ಯಿಂದಲೂ ಬದ್ಧವಾಗಿದ್ದು, ಜಿಲ್ಲೆಯ ಬೀದಳ್ಳಿ ಯಲ್ಲಿ ರೂ 16 ಕೋಟಿ ಹೂಡಿಕೆಯಲ್ಲಿ ಜಲ ವಿದ್ಯುತ್ ಘಟಕ ಸ್ಥಾಪಿಸುವ ಯೋಜನೆ ಹೊಂದಿದೆ.

ಕೈಗಾರಿಕಾ ವಿರೋಧಿ ಪಟ್ಟ
ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊಡಗಿನಲ್ಲಿ ಬಂಡವಾಳ ಹೂಡುವುದಾಗಿ ಆಸಕ್ತಿ ತೋರಿದ 26 ಉದ್ಯಮಪತಿಗಳ ಪೈಕಿ 21 ಜನರು ಕೊಡಗಿನವರೇ ಎನ್ನುವುದು ವಿಶೇಷ. ಇನ್ನುಳಿದ ಬಾಕಿ ಉಳಿದವರಲ್ಲಿ ಬೆಂಗಳೂ ರಿನವರು 3 ಹಾಗೂ ಮೈಸೂರಿನವರು 2 ಉದ್ಯಮಿಗಳು ಮಾತ್ರ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿರುವವರು.

ಜಿಲ್ಲೆಯ ವಿಶಿಷ್ಟ ಭೌಗೋಳಿಕ ಹಾಗೂ ಪರಿಸರವು ಉದ್ಯಮಗಳ ಪರವಾಗಿಲ್ಲ ಎನ್ನುವ ವಾದ ಒಂದೆಡೆಯಾದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ಜಾಗದ (ಕಂದಾಯ) ದಾಖಲೆಗಳು ಸಮರ್ಪಕವಾಗಿಲ್ಲ  ಮತ್ತು ಬಿಗಿ ಅರಣ್ಯ ಕಾನೂನಿನಿಂದಾಗಿ ಉದ್ಯಮಿಗಳು ಈ ಕಡೆ ಬರಲು ಒಲವು ತೋರುವುದಿಲ್ಲ ಎನ್ನಲಾಗುತ್ತದೆ.

ಒಪ್ಪಂದಕ್ಕಷ್ಟೇ ಸೀಮಿತವೇ?
ರಾಜ್ಯ ಬಿಜೆಪಿ ಸರ್ಕಾರ ಅತಿಹೆಚ್ಚು ಪ್ರಚಾರದೊಂದಿಗೆ ಆರಂಭಿಸಿದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಎಲ್ಲ ಒಪ್ಪಂದಗಳು ಕಾರ್ಯಗತವಾಗುತ್ತಿಲ್ಲ. ಸಾವಿರ ಕೋಟಿ, ಲಕ್ಷ ಕೋಟಿ ರೂಪಾ ಯಿ ಬಂಡವಾಳ ಹರಿದುಬರಲಿದೆ ಹಾಗೂ ಲಕ್ಷಾಂತರ ಜನರಿಗೆ ಉದ್ಯೋ ಗಾವಕಾಶ ಸೃಷ್ಟಿಸಲಿದೆ ಎಂದು ಪ್ರಚಾರ ಮಾಡಿದ್ದೇ ಬಂತು.

ಕಾರ್ಯರೂಪಕ್ಕೆ ಬೆರಳಣಿಕೆಯಷ್ಟು ಯೋಜನೆಗಳನ್ನು ಬಿಟ್ಟರೆ ಬೇರಾವ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಅದೇ ರೀತಿ ಕೊಡಗಿನಲ್ಲೂ ಆಗಿದೆ.
 
ಸಲಹೆ- ಸಹಕಾರ ನೀಡಲು ಸಿದ್ಧ
ಮಡಿಕೇರಿಯಲ್ಲಿ ಬಂಡವಾಳ ಸಮಾವೇಶ ಆಯೋಜಿಸಲು ಜಿಲ್ಲಾ ಚೇಂಬರ್ ಆಫ್     ಕಾಮರ್ಸ್ ಮುಂದೆ ಬಂದಿದೆ. ಪರಿಸರಕ್ಕೆ ಪೂರಕವಾಗಿರುವ ಉದ್ಯಮಗಳನ್ನು ಕರೆತರಲು ಅವರು ಯೋಜನೆ ಹಾಕಿಕೊಂಡಿದ್ದಾರೆ. ಬಂಡವಾಳ ಹೂಡಲು ಆಗಮಿಸುವ ಉದ್ಯಮಿಗಳಿಗೆ ಸಲಹೆ ನೀಡುವುದು ಹಾಗೂ ಸರ್ಕಾರದಿಂದ ದೊರೆಯುವ ಎಲ್ಲ ರೀತಿಯ ರಿಯಾಯಿತಿ, ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾವು ಬದ್ಧ.
   - ಶಬ್ಬೀರ್ ಪಾಶಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT