ಮಡಿಕೇರಿ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಕೊಡಗು ಜಿಲ್ಲಾ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಬ್ಬಾಲೆಯ ಶೇಖರ್ ಅವರು ಒಂದು ಸಾವಿರಕ್ಕೂ ಅಧಿಕ ಮತಗಳಿಂದ ವಿಜೇತರಾಗಿದ್ದಾರೆ.‘
ನಗರದ ಸಹಕಾರ ಯೂನಿಯನ್ ಸಭಾಂಗಣ ದಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಆರಂಭ ಗೊಂಡ ಮತ ಎಣಿಕೆ ಪ್ರಕ್ರಿಯೆ ಮಧ್ಯಾಹ್ನ 12ರ ವರೆಗೂ ನಡೆಯಿತು. ಮತ ಎಣಿಕೆಯ ಹಿನ್ನೆಲೆಯಲ್ಲಿ ಎಣಿಕಾ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳ ಬೆಂಬಲಿ ಗರು ಎಣಿಕೆಯ ಸುತ್ತಮುತ್ತ ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು. ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿ ಹೆಬ್ಬಾಲೆಯ ಶೇಖರ್ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲೆಗೆ ಮೀಸಲಿದ್ದ ಒಂದು ಸ್ಥಾನಕ್ಕೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜಿಲ್ಲೆಯಲ್ಲಿ ಒಟ್ಟು 8,190 ಮತದಾರರ ಪೈಕಿ 7,627 ಮತಗಳು ಚಲಾವಣೆಗೊಂಡಿದ್ದವು.
ವಿಜೇತ ಅಭ್ಯರ್ಥಿ ಹೆಬ್ಬಾಲೆಯ ಶೇಖರ್– 3,780, ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು– 2,605, ಸೋಮವಾರಪೇಟೆ ತಾಲ್ಲೂಕಿನ ಕರ್ಕಳ್ಳಿ ಗ್ರಾಮದ ನಿವಾಸಿ ಕೆ.ಟಿ. ಸಂದೀಪ್– 683, ಹರಪಳ್ಳಿ ಗ್ರಾಮದ ಎಚ್.ಎನ್. ರವೀಂದ್ರ– 544, ಹೊನ್ನವಳ್ಳಿ ಗ್ರಾಮದ ಎಚ್.ಕೆ. ಶೇಖರ್–13, ಕೂತಿ ಗ್ರಾಮದ ಹೂವಯ್ಯ – 2 ಮತಗಳನ್ನು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.