ಸುಂಟಿಕೊಪ್ಪ: ‘7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಅಪವಿತ್ರ ಮೈತ್ರಿಯಿಂದ ಮುಸ್ಲಿಂ ಮಹಿಳೆಗೆ ಸಿಗಬೇಕಾದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರೇ ವಂಚಿಸಿದರು. ಇದು ಕಾಂಗ್ರೆಸ್ ಪಕ್ಷದವರಿಗೆ ಅಲ್ಪಸಂಖ್ಯಾತರ ಮೇಲಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ’ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಸಾಕ್ಖಾನ್ ತಿಳಿಸಿದ್ದಾರೆ.
ಈಚೆಗೆ 7ನೇ ಹೊಸಕೊಟೆ ಗ್ರಾ.ಪಂ. ಅಧ್ಯಕ್ಷರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರ ಚುನಾವಣೆ ನಡೆಯಿತು. ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 6, ಬಿಜೆಪಿ ಬೆಂಬಲಿತ 4 ಸದಸ್ಯರಿದ್ದಾರೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸುಮಲತಾ ಸ್ಪರ್ಧಿಸಿದ್ದರೆ, ಕಾಂಗ್ರೆಸ್ನಿಂದ ಅಸೀನ ಸ್ಪರ್ಧಿಸಿದ್ದರು. ಹಾಗೂ ಮತ್ತೊಬ್ಬ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಿಂದಿನ ಅಧ್ಯಕ್ಷೆ ಸುಜಾತಾ ಸ್ಪರ್ಧಿಸಿದ್ದರು. ಮತ ಎಣಿಕೆಯಾದಾಗ ಬಿಜೆಪಿ ಅಭ್ಯರ್ಥಿ ಸುಮಲತಾ 6, ಸುಜಾತಾ 4 ಹಾಗೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಸೀನ ಶೂನ್ಯ ಮತ ಪಡೆದರು.
‘7ನೇ ಹೊಸಕೋಟೆ ವಿಭಾಗದ ಜಿ.ಪಂ.ಸದಸ್ಯರು, ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರ ಈ ನಿಗೂಢ ನಡೆ ಜಾತ್ಯತೀತ ನಿಲುವಿನ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಅಧಿಕಾರ ಸ್ಥಾನ ತಪ್ಪಿಸುವಲ್ಲಿ ತೆರೆಮರೆಯಲ್ಲಿ ಯಶಸ್ವಿಯಾಗಿದೆ’ ಎಂದು ಆರೋಪಿಸಿದರು.
‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ಪಸಂಖ್ಯಾತರ ಮಹಿಳೆಗೆ ಅಧಿಕಾರ ತಪ್ಪಿಸುವಲ್ಲಿ ಕಾಂಗ್ರೆಸ್ಸಿಗರು ಕೈ ಜೋಡಿಸಿದ ಬಗ್ಗೆ ಉತ್ತರಿಸಬೇಕಾಗಿದೆ’ ಎಂದು ಇಸಾಕ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.