ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮದ ಕಾಫಿ ತೋಟವೊಂದಕ್ಕೆ ಕಾಡಾನೆಗಳು ನುಗ್ಗಿ ಕಾಫಿ, ಬಾಳೆ ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬೇಳೂರು ಗ್ರಾಮದ ರಾಜು ಎಂಬವರ ಕಾಫಿ ತೋಟಕ್ಕೆ ನುಗ್ಗಿರುವ ಎರಡು ಆನೆಗಳು ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ.
ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಹಲಸಿನ ಹಣ್ಣುಗಳನ್ನು ತಿನ್ನಲು ಕಾಡಾನೆಗಳು ದಿನಂಪ್ರತಿ ಬರುತ್ತಿದ್ದು, ಈ ವ್ಯಾಪ್ತಿಯಲ್ಲಿ ನಿರಂತರ ದಾಂಧಲೆ ನಡೆಸುತ್ತಿವೆ.
ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುತ್ತಿದ್ದು, ಕಾರ್ಮಿಕರು ತೋಟದ ಕೆಲಸಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ತೋಟದ ಮಾಲೀಕರು ಆರೋಪಿಸಿದ್ದಾರೆ.
ರಾತ್ರಿಯಾಗುತ್ತಲೇ ತೋಟಕ್ಕೆ ಆನೆಗಳು ದಾಳಿಯಿಡುತ್ತಿದ್ದು, ಮನೆಯ ಹೊರಗೆ ತಿರುಗಾಡುವುದೇ ಕಷ್ಟವಾಗಿದೆ. ಅರಣ್ಯಾಧಿಕಾರಿಗಳು ಈ ಭಾಗದಲ್ಲಿರುವ ಆನೆಗಳನ್ನು ತಕ್ಷಣ ಕಾಡಿಗೆ ಅಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಸೋಮವಾರಪೇಟೆ: ತಾಲ್ಲೂಕಿನ ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ 2012/13 ನೇ ಸಾಲಿನ ಪರೀಕ್ಷೆಯಲ್ಲಿ 7ನೇ ತರಗತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಂಚಾಲಕರಾದ ಚಂದನ ಸುಬ್ರಮಣಿ ಅವರನ್ನು(ಮೊ- 94484 33316 ) ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.