ADVERTISEMENT

ಕಾವೇರಿ ಕಣಿವೆ ಜನರಲ್ಲಿ ಸಂತಸ

ಜಿಲ್ಲೆಗೆ ಮುಂಗಾರು ಆಗಮನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 7:08 IST
Last Updated 4 ಜೂನ್ 2013, 7:08 IST
ಬಾನಲ್ಲಿ ಚಿತ್ತಾರ..ಮಡಿಕೇರಿಯಲ್ಲಿ ಸೋಮವಾರ ಮೋಡಗಳ ಚಿತ್ತಾರ ಕಂಡು ಬಂದಿದ್ದು ಹೀಗೆ...
ಬಾನಲ್ಲಿ ಚಿತ್ತಾರ..ಮಡಿಕೇರಿಯಲ್ಲಿ ಸೋಮವಾರ ಮೋಡಗಳ ಚಿತ್ತಾರ ಕಂಡು ಬಂದಿದ್ದು ಹೀಗೆ...   

ಮಡಿಕೇರಿ: ಜಿಲ್ಲೆಗೆ ಮುಂಗಾರು ಮಳೆ ಪ್ರವೇಶ ಮಾಡಿದ್ದು, ಕಾವೇರಿ ಕಣಿವೆಯ ಜನರಲ್ಲಿ ಸಂತಸ ತಂದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು, ಭಾಗಮಂಡಲ ಸೇರಿದಂತೆ ಮತ್ತಿತರರ ಪ್ರದೇಶಗಳಲ್ಲಿ ಸೋಮವಾರ ಮಳೆ ಕೊಂಚ ಕಡಿಮೆಯಾಗಿದೆ.

ಮಡಿಕೇರಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಆಗಾಗ ತುಂತುರು ಮಳೆ ಆಯಿತು. ವಿರಾಜಪೇಟೆ, ಭಾಗಮಂಡಲದಲ್ಲೂ ಮಳೆಯ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ.ಮೂರು ದಿನಗಳಿಂದ ಆರಂಭವಾಗಿರುವ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಭಾಗದ ಕರೆ, ಕಟ್ಟೆಗಳಲ್ಲಿ ನೀರು ತುಂಬುತ್ತಿದೆ. ನದಿ ತೀರ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಿದೆ.
ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಸರಾಸರಿ 23.84 ಮಿ.ಮೀ. ಮಳೆ ಯಾಗಿದೆ. ಕಳೆದ ವರ್ಷ ಇದೇ ದಿನ 0.16 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ವರೆಗೆ 222.02 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 187.71 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 36.95 ಮಿ.ಮೀ. ಸರಾಸರಿ ಮಳೆಯಾಗಿದೆ. ಜನವರಿಯಿಂದ ಇಲ್ಲಿಯ ವರೆಗೆ 303.29 ಮಿ.ಮೀ. ಮಳೆಯಾಗಿದೆ.ವೀರಾಜಪೇಟೆ ತಾಲ್ಲೂಕಿನಲ್ಲಿ 28.57 ಮಿ.ಮೀ. ಮಳೆ ದಾಖಲಾಗಿದೆ. ಜನವರಿಯಿಂದ 142.64 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 6 ಮಿ.ಮೀ. ಸರಾಸರಿ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 220.17 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 23.80 ಮಿ.ಮೀ., ನಾಪೋಕ್ಲು 28.80 ಮಿ.ಮೀ., ಸಂಪಾಜೆ 33.80 ಮಿ.ಮೀ., ಭಾಗಮಂಡಲ 61.40 ಮಿ.ಮೀ., ವೀರಾಜಪೇಟೆ ಕಸಬಾ 44.20 ಮಿ.ಮೀ., ಹುದಿಕೇರಿ 25.10 ಮಿ.ಮೀ., ಶ್ರಿಮಂಗಲ 28.20 ಮಿ.ಮೀ., ಪೊನ್ನಂಪೇಟೆ 31.60 ಮಿ.ಮೀ., ಅಮ್ಮತ್ತಿ 20.30 ಮಿ.ಮೀ., ಬಾಳಲೆ 19 ಮಿ.ಮೀ., ಸೋಮವಾರಪೇಟೆ ಕಸಬಾ 4.60 ಮಿ.ಮೀ., ಶಾಂತಳ್ಳಿ 19.20 ಮಿ.ಮೀ. ಮಳೆಯಾಗಿದೆ.

ಕಡಿಮೆಯಾದ ಮಳೆ: ಆತಂಕ
ಗೋಣಿಕೊಪ್ಪಲು: ಎರಡು ದಿನಗಳಿಂದ ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಸುರಿದ ಮಳೆ ಸೋಮವಾರ ಮಧ್ಯಾಹ್ನದ ಬಳಿಕ ಮರೆಯಾಯಿತು. ಬೆಳಿಗ್ಗಿನಿಂದ ತುಂತುರು ಮಳೆ ಬೀಳುತಿತ್ತು. ಮಧ್ಯಾಹ್ನದ ನಂತರ ಬಿಸಿಲು  ಕಾಣಿಸಿಕೊಂಡಿತು.
ಭಾನುವಾರ ಬಿದ್ದ ಮಳೆ ಉತ್ತಮವಾಗಿದ್ದರೂ ಕುಡಿಯುವ ನೀರು, ಕೃಷಿ ಇಂತಹ ಕಾರ್ಯಗಳಿಗೆ ಸಾಕಾಗಲಿಲ್ಲ. ಕೊಳವೆಬಾವಿ ಮತ್ತು ತೆರೆದಬಾವಿ ಕೆರೆಗಳಿಗೆ ನೀರು ಬರಲಿಲ್ಲ. ಆದರೆ ಮೋಡ ಕವಿದ ವಾತಾವರಣದಲ್ಲಿ ಆಗಾಗ್ಗೆ ತುಂತುರು ಮಳೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯನ್ನು ಕೃಷಿಕರು ಹೊಂದಿದ್ದಾರೆ.

ಈ ಬಾರಿ ಮುಂಗಾರು ಮಳೆ ಸಕಾಲದಲ್ಲಿ ಆರಂಭಗೊಂಡು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಮುಂದೆ ಇದೇ ರೀತಿ ಮಳೆಯಾದರೆ ಸಾಕು ಎಂಬ ಭಾವನೆ ರೈತರಲ್ಲಿದೆ.

ಶನಿವಾರಸಂತೆಯಲ್ಲಿ ತುಂತುರು ಮಳೆ
ಶನಿವಾರಸಂತೆ: ಪಟ್ಟಣ ಹಾಗೂ ಸಮೀಪದ ಬಿಳಾಹ, ಲೆಕ್ಕೆದಾನ, ಮಾದ್ರೆ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯಿತು.ಶುಕ್ರವಾರದಿಂದಲೂ ಶನಿವಾರಸಂತೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹದವಾದ ಮಳೆ ಸುರಿಯುತ್ತಿದ್ದು; ಶನಿವಾರಸಂತೆ ಪಟ್ಟಣದಲ್ಲಿ ಒಂದೂ ವರೆ ಇಂಚು, ಮಾದ್ರೆ ಗ್ರಾಮದಲ್ಲಿ ಎರಡೂವರೆ ಇಂಚು ಹಾಗೂ ಲೆಕ್ಕೆದಾನ ಮತ್ತು ಬಿಳಾಹ ಗ್ರಾಮಗಳಲ್ಲಿ ಮುಕ್ಕಾಲು ಇಂಚು ಮಳೆಯಾಗಿದೆ.

`ಮುಂಗಾರು ಮಳೆ ಆರಂಭವಾಗಿದೆ. ಮೂರು ದಿನಗಳಿಂದ ತುಂತುರು ಮಳೆ ಹದವಾಗಿ ಸುರಿಯುತ್ತಿರುವುದರಿಂದ ಖುಷಿಯಾಗಿದೆ. ಜೋಳ ಬಿತ್ತನೆ ಕಾರ್ಯ ಶುರು ಮಾಡಿದ್ದೇವೆ. ಕಾಫಿತೋಟಕ್ಕೆ ಗೊಬ್ಬರ ಹಾಕುತ್ತಿದ್ದೇವೆ. ಬತ್ತದ ವ್ಯವಸಾಯಕ್ಕೆ ಗದ್ದೆಯಲ್ಲಿ ಉಳುಮೆ ಕೆಲಸ ಆಗುತ್ತಿದೆ' ಎಂದು ಕೃಷಿಕ ಮಂಜುನಾಥ್ ಉತ್ಸಾಹದಿಂದ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.