ADVERTISEMENT

ಕುಶಾಲನಗರ: ಆಹಾರ ಅಪವ್ಯಯ ತಡೆಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:35 IST
Last Updated 17 ಅಕ್ಟೋಬರ್ 2011, 10:35 IST

ಕುಶಾಲನಗರ: ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಆಹಾರ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ ಭಾನುವಾರ ವಿಶ್ವ ಆಹಾರ ದಿನದ ಅಂಗವಾಗಿ ಆಹಾರ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ  ಕುಶಾಲನಗರ ಪಟ್ಟಣದಲ್ಲಿ ಆಹಾರ ಅಪವ್ಯಯ ತಡೆಗಟ್ಟುವಿಕೆ ಕುರಿತು ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.

ಬೈಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್ನೆಸ್ಸೆಸ್ ಶಿಬಿರದಿಂದ ಆರಂಭವಾದ ಜಾಥಾದಲ್ಲಿ   ಶಿಬಿರಾರ್ಥಿಗಳು ಆಹಾರ ಅಪವ್ಯಯ ತಡೆಗಟ್ಟುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಿದರು. 
ಆಹಾರ ಅಪವ್ಯಯ ತಡೆಗಟ್ಟುವ ಕುರಿತಂತೆ ವಿವಿಧ ಘೋಷಣಾ ಫಲಕಗಳೊಂದಿಗೆ ಪಾದಯಾತ್ರೆ ಮೂಲಕ ತೆರಳಿದ ವಿದ್ಯಾರ್ಥಿಗಳು, ಆಹಾರ ಸಂರಕ್ಷಣೆ ಬಗ್ಗೆ ನಾಗರಿಕರ ಗಮನ ಸೆಳೆದರು.

ಚಿಂತಕ ಭಾರದ್ವಾಜ ಕೆ.ಆನಂದತೀರ್ಥ ಮಾತನಾಡಿ, ಕೃಷಿಕರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಆಹಾರವನ್ನು ಪೋಲು ಮಾಡದೆ ಭವಿಷ್ಯದಲ್ಲಿ ಎದುರಾಗಬಹುದಾದ ಆಹಾರ ಸಮಸ್ಯೆಯನ್ನು ತಡೆಗಟ್ಟುವ ದಿಸೆಯಲ್ಲಿ ಇಂತಹ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಅಭಿಯಾನದ ಸಂಚಾಲಕ ಎನ್.ಕೆ.ಮೋಹನ್‌ಕುಮಾರ್ ಅವರ ವಿಶೇಷ ಆಸಕ್ತಿ, ದೂರದೃಷ್ಟಿಯಿಂದ ನಡೆಯುತ್ತಿರುವ ಈ ಅಭಿಯಾನವನ್ನು ಮುನ್ನಡೆಸುವ ಸಂಕಲ್ಪ ಮಾಡಬೇಕು ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಜಿ.ಪ್ರೇಮಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ವಿದ್ಯಾರ್ಥಿಗಳು ಆಹಾರ ಅಪವ್ಯಯ ತಡೆಗಟ್ಟುವ ಕುರಿತ ಕರಪತ್ರ ಹಂಚಿದರು.

ಎಸ್‌ಡಿಎಂಸಿ ಅಧ್ಯಕ್ಷ ಶೇಖರ್‌ನಾಯಕ್, ಎನ್ನೆಸ್ಸೆಸ್ ಶಿಬಿರಾಧಿಕಾರಿ ಎಚ್.ಕೆ.ತಿಲಗಾರ್, ಬೈಚನಹಳ್ಳಿ ಪ್ರಗತಿ ಯುವಕ ಸಂಘದ ಅಧ್ಯಕ್ಷ ವಿನು, ಕಾರ್ಯದರ್ಶಿ ಚಂದನಕುಮಾರ್, ಪದಾಧಿಕಾರಿಗಳಾದ ಗಂಗಾಧರ್, ಶಿವು, ಕಿರಣ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.