ಕುಶಾಲನಗರ : ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಗಜ ಪಡೆಯ ಎರಡನೇ ತಂಡ ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ವಿಕ್ರಮ್, ಹರ್ಷ, ಗೋಪಿ, ಕಾವೇರಿ ಆನೆಗಳು ಸೆ.14ರಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.
ಈ ಸಾಕಾನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಎರಡು ತಿಂಗಳಿನಿಂದಲೂ `ವಾಕ್~ನೊಂದಿಗೆ ವ್ಯಾಯಾಮ ಮಾಡಿ ಸುವ ಮೂಲಕ ತಾಲೀಮು ನಡೆಸ ಲಾಗುತ್ತಿದೆ. ಮೈಸೂರಿಗೆ ಕಳುಹಿಸುವ ದಿಸೆಯಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಹರ್ಷ, ಗೋಪಿ, ಕಾವೇರಿ ಆನೆಗಳನ್ನು ಸೋಮವಾರ ವನಪಾಲಕ ಅಪ್ಪಸ್ವಾಮಿ ಮಾವುತರ ನೆರವಿನೊಂದಿಗೆ ಮಧ್ಯಾಹ್ನ ಆನೆಕಾಡು ಶಿಬಿರಕ್ಕೆ ಕರೆ ತಂದರು.
ಹಿರಿಯ ಸಾಕಾನೆ ವಿಕ್ರಮ್ಗೆ ಮಾತ್ರ ಆನೆಕಾಡಿನಲ್ಲೇ ತರಬೇತಿ ನೀಡಲಾಗು ತ್ತಿದ್ದು, ಈ ನಾಲ್ಕು ಆನೆಗಳನ್ನು ಬುಧ ವಾರ ಅರಣ್ಯ ಇಲಾಖೆ ವತಿಯಿಂದ ಆನೆಕಾಡಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ವಾಹನದ ಮೂಲಕ ಮೈಸೂರಿಗೆ ಬೀಳ್ಕೊಡಲಾಗುವುದು ಎಂದು ಕುಶಾಲನಗರ ಆರ್ಎಫ್ಓ ಅಚ್ಚಪ್ಪ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.
ಕೆಲವು ವರ್ಷಗಳಿಂದ ಸತತವಾಗಿ ದಸರಾ ಉತ್ಸವಕ್ಕೆ ತೆರಳುತ್ತಿರುವ 40 ವರ್ಷದ ವಿಕ್ರಮ್, 36 ವರ್ಷದ ಹರ್ಷ ಉತ್ತಮ ದೇಹ ಧಾರ್ಡ್ಯತೆ ಹೊಂದಿದ್ದು, ಮೆರವಣಿಗೆಯಲ್ಲಿ ತಮ್ಮ ಗಾಂಭೀರ್ಯ ವನ್ನು ಮೆರೆದಿವೆ.
ಅರಣ್ಯ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯದಲ್ಲಿ ನಡೆಸಿದ ಎಲಿಫೆಂಟ್ ಕಾರ್ಯಾಚರಣೆ ಸಂದರ್ಭ ಸೆರೆಯಾದ `ಪುಂಡಾನೆ~ ಕಾವೇರಿ ಮಾತ್ರ ಇದೇ ಮೊದಲ ಸಲ ದಸರಾ ಮೆರವಣಿಗೆಯಲ್ಲಿ ಪಾಲ್ಗೊ ಳ್ಳಲು ತೆರಳುತ್ತಿರುವುದು ಈ ಬಾರಿಯ ವಿಶೇಷ. ಸಾಕಾನೆ ಕಾವೇರಿಗೆ ದುಬಾರೆ ಶಿಬಿರದಲ್ಲಿ ಮಾವುತರು ಈಗಾಗಲೇ ಶಿಸ್ತು - ಸಂಯಮದ ಪಾಠ ಕಲಿಸಿದ್ದಾರೆ.
ಒಂದೆರೆಡು ಬಾರಿ ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ ಅನು ಭವ ಹೊಂದಿರುವ ಉತ್ತಮ ಮೈಕಟ್ಟಿನ 32 ವರ್ಷದ ಗೋಪಿಯನ್ನು ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಬಲರಾಮನ ಉತ್ತರಾಧಿಕಾರಿಯಾಗಿ ರೂಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.