ADVERTISEMENT

ಗಾಯಗೊಂಡ ಕಡವೆಗೆ ಸೂಕ್ತ ಆರೈಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 8:15 IST
Last Updated 19 ಮಾರ್ಚ್ 2011, 8:15 IST
ಗಾಯಗೊಂಡ ಕಡವೆಗೆ ಸೂಕ್ತ ಆರೈಕೆ
ಗಾಯಗೊಂಡ ಕಡವೆಗೆ ಸೂಕ್ತ ಆರೈಕೆ   

ಮಡಿಕೇರಿ: ಮಡಿಕೇರಿ- ಕುಶಾಲನಗರ ರಸ್ತೆ ನಡುವಣ ‘ಟೈಗರ್ ಹಿಲ್ಸ್’ ಎಸ್ಟೇಟ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ‘ಕಡವೆ’ಗೆ ಅರಣ್ಯ ಇಲಾಖೆ ಸಿಬ್ಬಂದಿ, ಶುಕ್ರವಾರ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೈಕೆ ಮಾಡಿತು.ಟೈಗರ್ ಹಿಲ್ಸ್ ಎಸ್ಟೇಟ್ ಬಳಿ ರಾತ್ರಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಲೆ ಭಾಗಕ್ಕೆ ಪೆಟ್ಟು ಬಿದ್ದ ಕಡವೆ, ಸ್ಥಳದಲ್ಲಿಯೇ ಬಿದ್ದಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಅದನ್ನು ಇಲಾಖೆಯ ಅತಿಥಿಗೃಹ ಬಳಿ ತಂದರು.

ಆನಂತರ ಪಶುವೈದ್ಯ ಇಲಾಖೆಯ ವೈದ್ಯರ ಮೂಲಕ ಗಾಯಗೊಂಡಿದ್ದ ಕಡವೆಗೆ ಗ್ಲೋಕೋಸ್ ಹಾಗೂ ಔಷಧಿ ನೀಡಿ ಉಪಚಾರ ಮಾಡಲಾಯಿತು. ಸ್ವಲ್ಪ ಹೊತ್ತಿನಲ್ಲೇ ಚೇತರಿಸಿಕೊಂಡ ಕಡವೆಯನ್ನು ಮಧ್ಯಾಹ್ನ 3 ಗಂಟೆ ನಂತರ ಹಗ್ಗ ಬಿಚ್ಚಿ ಓಡಾಡಲು ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸಂಪೂರ್ಣ ಚೇತರಿಸಿಕೊಂಡಂತೆ ಕಂಡು ಬಂದ ಕಡವೆ ತಂತಿ ಬೇಲಿಯಿಂದ ತೂರಿ ಕಾಡಿನತ್ತ ಓಡಿತು ಎಂದು ಆರ್‌ಎಫ್‌ಓ ದಯಾನಂದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸುಮಾರು ನಾಲ್ಕು ಬಾಟಲಿ ಗ್ಲೂಕೋಸ್ ಹಾಗೂ ಅಗತ್ಯ ಔಷಧಿಯನ್ನು ಕಡವೆಗೆ ನೀಡಲಾಗಿದ್ದು, ಅದು ಕಾಡಿನಲ್ಲಿ ಬಹುದೂರ ಓಡಿದ್ದನ್ನು ಗಮನಿಸಿದರೆ ಸಂಪೂರ್ಣ ಚೇತರಿಸಿಕೊಂಡಿರಬಹುದೆಂಬುದು ದೃಢಪಡುತ್ತದೆ ಎಂದು ಆರ್‌ಎಫ್‌ಓ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.