ADVERTISEMENT

ಚದುರಂಗ: ರಾಜ್ಯ ಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:36 IST
Last Updated 24 ಸೆಪ್ಟೆಂಬರ್ 2013, 6:36 IST

ಕುಶಾಲನಗರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಎರಡು ತಂಡಗಳು ರಾಜ್ಯ ಮಟ್ಟದ ಟೂರ್ನಿಗೆ ಆಯ್ಕೆಯಾಗಿವೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಚದುರಂಗ ಪಂದ್ಯಾವಳಿಗೆ ಕಾಲೇಜು ಪ್ರಾಂಶುಪಾಲರಾದ ಮಾಲತಿ ಚಾಲನೆ ನೀಡಿದರು. ಜಿಲ್ಲಾ ಮಟ್ಟದ ಈ ಟೂರ್ನಿಗೆ ಜಿಲ್ಲೆಯ 3 ತಾಲ್ಲೂಕುಗಳಿಂದ ಬಾಲಕರ 3 ಮತ್ತು ಬಾಲಕಿಯರ 3 ತಂಡಗಳು ಸೇರಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಬಾಲಕಿಯರ ವಿಭಾಗದಿಂದ ಮಡಿಕೇರಿ ತಾಲ್ಲೂಕಿನ ಸೇಂಟ್ ಮೈಕಲ್ ಕಾಲೇಜಿನ ಒಂದು ತಂಡ ಮತ್ತು ಸೋಮವಾರ ಪೇಟೆ ತಾಲ್ಲೂಕಿನಿಂದ ಬಾಲಕರ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.

ಕೊಡವ ಸಮಾಜ; ನಿರ್ದೇಶಕರ ಆಯ್ಕೆ
ಮಡಿಕೇರಿ:  ಇಲ್ಲಿನ ಕೊಡವ ಸಮಾಜದ ನಿರ್ದೇಶಕರಾಗಿ ಬೊಟ್ಟೋಳಂಡ ಅಚ್ಚಯ್ಯ (ಕಾಶಿ),  ಬೊಳ್ಳಜೀರ ಬಿ.ಅಯ್ಯಪ್ಪ, ಕಾಳಪ್ಪ ಚೋವಂಡ ಡಿ.(ರಘು), ಮಣವಟ್ಟೀರ ಈ.ಚಿಣ್ಣಪ್ಪ, ಮಂಡೀರ ಎ.ಪೂಣಚ್ಚ (ದೇವಿ), ಮುಂಡಂಡ ಬಿ.ಪೂವಪ್ಪ, ಮಾದೇಟಿರ ಪಿ.ಬೆಳ್ಯಿಪ್ಪ ಹಾಗೂ ಅರೆಯಡ ಪಿ.ರಮೇಶ್‌ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 2718 ಸದಸ್ಯರ ಪೈಕಿ 1,142 ಸದಸ್ಯರು ಮತ ಚಲಾಯಿಸಿದ್ದರು. 

ಜಿಲ್ಲೆಗೆ ಕೇಂದ್ರ ತಂಡ ಭೇಟಿ ಇಂದು
ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಜೂನ್-–ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಆಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಪ್ರಕೃತಿ ವಿಕೋಪ ತಂಡವು ಸೆ 24ರಂದು ಸಂಜೆ ಜಿಲ್ಲೆಗೆ ಆಗಮಿಸಲಿದ್ದು ಸೆ 25ರಂದು ಪರಿಶೀಲನೆ ನಡೆಸಲಿದೆ.
ಸೆ 24ರಂದು ಸಂಜೆ ವೇಳೆ ಮಂಗಳೂರಿನಿಂದ ಮಡಿಕೇರಿ ಆಗಮಿಸುವ ಸಂದರ್ಭದಲ್ಲಿ ಕೊಯನಾಡು ರಸ್ತೆ ವೀಕ್ಷಣೆ ಮಾಡಲಿದ್ದಾರೆ.

ಸೆ 25ರಂದು ಬೆಳಿಗ್ಗೆ 8.30 ಗಂಟೆಗೆ ನಗರದ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಳೆಹಾನಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಬೆಳಿಗ್ಗೆ 9ರ ನಂತರ ನಂತರ ಮಕ್ಕಂದೂರು, ಸಿಂಕೋನ, ಚೆಟ್ಟಳ್ಳಿ, ಸಿದ್ದಾಪುರ, ಪೊನ್ನಂಪೇಟೆ ಮತ್ತಿತರ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT