ADVERTISEMENT

ಜನಹಿತಕ್ಕೆ ಭೂಮಿ ಮೀಸಲಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 9:17 IST
Last Updated 26 ಸೆಪ್ಟೆಂಬರ್ 2013, 9:17 IST

ಮಡಿಕೇರಿ: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗವನ್ನು  ಸರ್ಕಾರವೇ ನೇರವಾಗಿ ಒಡೆತನಕ್ಕೆ ತೆಗೆದುಕೊಳ್ಳುವ ಜೊತೆಗೆ ಈ ಭೂಮಿಯನ್ನು ಸಾರ್ವಜನಿಕರ ಹಿತಕ್ಕಾಗಿ ಬಳಸುವಂತೆ ಒತ್ತಾಯಿಸಿ ಅಕ್ಟೋಬರ್‌ 2ರಂದು ಕುಶಾಲನಗ ಪಟ್ಟಣ ಪಂಚಾಯಿತಿ ಮುಂದೆ ಉಪವಾಸ ನಡೆಸುವುದಾಗಿ ಜೆಡಿಎಸ್‌ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸುತ್ತ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಕಪಳಿಸುವ ಭೂ ಮಾಫಿಯಾ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಇದರಲ್ಲಿ ಸರ್ವೆ ಇಲಾಖಾಧಿಕಾರಿಗಳು, ರಾಜಕೀಯ ಪ್ರಮುಖರು ಹಾಗೂ ಬಂಡವಾಳ ಶಾಹಿಗಳು ಶಾಮಿಲಾಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಬೈಚನಹಳ್ಳಿ ಸಮೀಪದಲ್ಲಿ ಸರ್ವೆ ನಂಬರ್‌ 2/1ರಲ್ಲಿದ್ದ 9 ಎಕರೆ ಜಾಗ ಕಳೆದ ಮೂರು ವರ್ಷಗಳ ಹಿಂದೆ 7.35 ಎಕರೆಯಾಗಿತ್ತು. ಈಗ ಇದೇ ಜಾಗ 3.64 ಎಕರೆಯಷ್ಟು ಎಂದು ಹೇಳಲಾಗುತ್ತಿದೆ ಎಂದು ದೂರಿದರು.

ಇತೀ್ತಚೆಗೆ ಸೋಮವಾರಪೇಟೆಯ ಭೂಮಾಪಕರೊಬ್ಬರು ಸರ್ವೆ ಮಾಡಿ ಕೇವಲ 3.64 ಎಕರೆ ಜಾಗ ಎಂದು ನಮೂದಿಸುವ ಮೂಲಕ ಸರ್ಕಾರಿ ಜಾಗವನ್ನು ಅತೀಕ್ರಮಣ ಮಾಡಲು ಬೆಂಬಲಿ ನೀಡುವ ಜೊತೆಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಈ ಭೂಮಾಪಕನನ್ನು ಸೇವೆಯಿಂದ ವಜಾಗೊಳಿಸಿ, ಈ ವ್ಯಾಪ್ತಿಯಲ್ಲಿರುವ ಜಮೀನನ್ನು ಸರ್ಕಾರ ಪಡೆಯುವ ಜೊತೆಗೆ ಸಾರ್ವಜನಿಕರ ಹಿತಕ್ಕಾಗಿ ಮೀಸಲಿಡುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಈ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.

ವಕ್ತಾರ ಮುನೀರ್‌ ಅಹಮದ್‌, ನಗರಾಧ್ಯಕ್ಷ ರಾಜೇಶ್‌, ವಾಲ್ಮೀಕಿ ಘಟಕದ ಅಧ್ಯಕ್ಷ ಅಶೋಕ್‌, ಪ್ರಮುಖರಾದ ಆನಂದ್‌ ಕುಮಾರ್‌, ಜಯಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.