ADVERTISEMENT

ಜಾಗಟೆ ಬಾರಿಸಿ ವಿಶಿಷ್ಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 7:02 IST
Last Updated 30 ಅಕ್ಟೋಬರ್ 2017, 7:02 IST

ಸುಂಟಿಕೊಪ್ಪ: ಕಾವೇರಿ ತಾಲ್ಲೂಕು ರಚನೆಗೆ ಆಗ್ರಹಿಸಿ ಇಲ್ಲಿನ ಕಾವೇರಿ ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ಕರ್ಣಾಟಕ ಬ್ಯಾಂಕಿನ ಮುಂಭಾಗದಲ್ಲಿ ಭಾನುವಾರ ಜಾಗಟೆ ಬಾರಿಸುತ್ತಾ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಕನ್ನಡ ವೃತ್ತದಿಂದ ಬಸ್‌ ನಿಲ್ದಾಣದವರೆಗೆ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕರ್ಣಾಟಕ ಬ್ಯಾಂಕಿನ ಮುಂಭಾಗದಲ್ಲಿ ಜಾಗಟೆ ಬಾರಿಸುತ್ತಾ, ’ಆಗಲೇಬೇಕು ಆಗಲೇಬೇಕು ಕಾವೇರಿ ತಾಲ್ಲೂಕು ಆಗಲೇಬೇಕು, ಬೇಕೇ ಬೇಕು ತಾಲ್ಲೂಕು ಬೇಕು’ ಎಂಬ ಘೋಷಣೆ ಕೂಗುತ್ತಾ ಧರಣಿ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸುಂಟಿಕೊಪ್ಪ ಹೊರಾಟ ಸಮಿತಿ ಅಧ್ಯಕ್ಷ ಸಬಾಸ್ಟಿನ್, ಕಾವೇರಿ ತಾಲ್ಲೂಕು ರಚನೆಗಾಗಿ ಈ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಹೋರಾಟ ಸಮಿತಿಯ ಸದಸ್ಯ ಉಸ್ಮಾನ್ ಮಾತನಾಡಿ, ಅ.30ರಂದು ಕುಶಾಲನಗರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ಈ ಭಾಗದ ಎಲ್ಲ ಗ್ರಾಮಸ್ಥರು ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ.ನರಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸದಸ್ಯರಾದ ಕೆ.ಇ.ಕರೀಂ, ಬಿ.ಎಂ. ಸುರೇಶ್, ನಾಗರತ್ನ, ಪತ್ರಕರ್ತರ ಸಂಘದ ಅಧ್ಯಕ್ಷ ವಿನ್ಸೆಂಟ್, ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್, ಇಸಾಕ್ ಖಾನ್, ಎಂ.ಎ. ಉಸ್ಮಾನ್, ನಾಗೇಶ್ ಪೂಜಾರಿ, ಅಣ್ಣಾಶೇರಿಪ್, ಅಶೋಕ್ ಶೇಟ್, ಫ್ರೂಟ್ ಉಸ್ಮಾನ್, ಸಲೀಂ, ವಹೀದ್ ಜಾನ್, ಜಾಹೀದ್ ಆಹ್ಮದ್, ಧನುಕಾವೇರಪ್ಪ, ಕೆ.ಎಸ್.ಅನಿಲ್ ಕುಮಾರ್, ರಜಾಕ್, ಬಿ.ಐ.ಭವಾನಿ, ಶಿವಮಣಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.