ಗೋಣಿಕೊಪ್ಪಲು: ಭಯೋತ್ಪಾದಕತೆ ಜಾಗತಿಕ ಶಾಂತಿಗೆ ಬಹುದೊಡ್ಡ ಸವಾಲಾಗಿದೆ. ಯುವ ಜನಾಂಗ ಇಂತಹ ಭಯೋತ್ಪಾದಕತೆ ಬಗ್ಗೆ ಎಚ್ಚರದಿಂದ ಇರಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಅಜಯಕುಮಾರ್ ಸಿಂಗ್ ಹೇಳಿದರು.
ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಸೋಮವಾರ ನಡೆದ ಭಯೋತ್ಪಾದನೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆಯನ್ನು ಹದೆಗೆಡಿಸಿ ಆಡಳಿತ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಉಗ್ರಗಾಮಿಗಳು ನಿರಂತರವಾಗಿ ಸಂಚು ರೂಪಿಸುತ್ತ ಬರುತ್ತಿದ್ದಾರೆ. ಆದರೆ, ದೇಶದ ಆಡಳಿತ ವ್ಯವಸ್ಥೆ ಸುಭದ್ರವಾಗಿದ್ದು, ಜನತೆ ಒಗ್ಗಟ್ಟಿನಿಂದ ಇರುವವರೆಗೂ ಭಯೋತ್ಪಾದಕರ ಈ ತಂತ್ರ ಫಲಿಸದು ಎಂದು ಹೇಳಿದರು.
ಬಡತನ, ನಿರುದ್ಯೋಗ, ಶೋಷಣೆ ಮತ್ತು ಅನ್ಯಾಯ ಭಯೋತ್ಪಾದಕತೆಯ ಮೂಲ ಗುರಿಯಾಗಿದ್ದು, ಯುವಜನಾಂಗಕ್ಕೆ ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇಂತಹ ಆಮಿಷಗಳಿಗೆ ಯುವ ಜನಾಂಗ ಬಲಿಯಾಗ ಬಾರದು ಎಂದು ಕಿವಿಮಾತು ತಿಳಿಸಿದರು.
ನಿವೃತ್ತ ಮೇಜರ್ ಜನರಲ್ ಕೆ.ಪಿ. ನಂಜಪ್ಪ, ಕಾಲೇಜಿನ ಕಾರ್ಯದರ್ಶಿ ಕೆ.ಎನ್. ಉತ್ತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಎ.ಟಿ. ಭೀಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಐ.ಕೆ. ಬಿದ್ದಪ್ಪ ಸ್ವಾಗತಿಸಿದರು. ಬಳಿಕ ತಜ್ಞರಿಂದ ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.